Tuesday, March 15, 2022

ಧ್ವನಿ ಬಿಂಬ 11

ಧ್ವನಿಬಿಂಬ 11

ಪರೀಕ್ಷೆಗಳು ಹತ್ತಿರ ಬಂದವು. ವಿದ್ಯಾರ್ಥಿಗಳಿಗೆ ಪೋಷಕರಿಗೆ ಆತಂಕ.
ಕೊರೊನಾ ,online , offline ಈ ಗೊಂದಲಗಳಲ್ಲಿ ಯಾರು ಎಷ್ಟು ಕಲಿತಿದ್ದಾರೋ.. ಏನು ಬರೆಯುತ್ತಾರೋ ತಿಳಿಯದು.
ಪರೀಕ್ಷೆ ಬರೆಯಲು ಮಾತ್ರ ಓದಬೇಕೇ.
"ನಾನು ಪರೀಕ್ಷೆ ಬರೆಯಲಾರೆ. ಆದರೆ ನನಗೆ ವಿಷಯ ಗೊತ್ತು, "ಎನ್ನುತ್ತಾನೆ ಒಬ್ಬ..
" ಕೊನೆಯ ದಿನದವರೆಗೆ ಓದಿರಲಿಲ್ಲ, ಗೆಳೆಯನಿಗೆ ಕರೆ ಮಾಡಿ ಸುಮ್ಮನೆ ಅವನಿಂದ ಒಮ್ಮೆ ಮುಖ್ಯವಾದ ವಿಚಾರ ಓದಿಸಿಕೊಳ್ಳುತ್ತೇನೆ. ವಿವರಿಸು ಎನ್ನುತ್ತೇನೆ. ಕೇಳುತ್ತೇನೆ. ಆ ಕೇಳ್ಮೆ ಆಧಾರದಲ್ಲಿ ಬರೆಯುತ್ತೇನೆ.
ನನಗೆ ಅವನಿಗಿಂತ ಜಾಸ್ತಿ Marks ಬರುತ್ತೆ ಯಾವಾಗಲೂ ಹಾಗೇ.. "ಎಂದು ಹೇಳುತ್ತಾನೆ. ಒಬ್ಬ ವಿದ್ಯಾರ್ಥಿ.
"Text book ಕೊಟ್ಟರೂ ಅವನು ಉತ್ತರ ಬರೆಯಲಾರ "ಎಂದು ಮತ್ತೊಬ್ಬನ ಬಗ್ಗೆ ಉವಾಚ.
ತುಂಬಾ ಮಂದಿ ಪ್ರಸಿದ್ಧ ನಾಮರು "ನಾನು ಓದಲಿಲ್ಲ, ನನಗೆ ವಿದ್ಯೆ ತಲೆಗೆ ಹತ್ತಲಿಲ್ಲ " ಎಂದು ಹೇಳುವುದನ್ನು ಕೇಳಿದ್ದೇವೆ.
ಹಾಗಾದರೆ ಏನು ಈ ಓದು? 
ವಿದ್ಯೆ ಅಂದರೆ ಏನು?
1632 ರಲ್ಲೇ ಭೂಮಿ ಚಲಿಸುತ್ತದೆ, ಭೂಮಿ ಗುಂಡಗೆ ಇದೆ , ಸೂರ್ಯ ಒಂದೇ ಕಡೆ ಇದ್ದಾನೆ ಎಂಬ ವಿಚಾರಗಳನ್ನು ವಿವರಿಸಿ ಹೇಳಿದ ಗೆಲಿಲಿಯೋ  . 
ಅವನ ವಿದ್ಯೆ, ಅವನ ಸಂಶೋಧನೆ ಅಂಗೀಕಾರವಾಗದೆ ಸಂಪ್ರದಾಯವಾದಿಗಳು ಅವನ ವಿರುದ್ಧ ಅಪಪ್ರಚಾರ ಮಾಡಿದರು. ಇಲ್ಲದ ಆರೋಪ ಹೊರಿಸಿದರು..
ಅವನು ದೇವಾಲಯದಲ್ಲಿ ಮಂಡಿಯೂರಿ ಕುಳಿತು " ಇದುವರೆಗೆ ನಾನು ಬರೆದದ್ದು ಬೋಧಿಸಿದ್ದು ಸುಳ್ಳು, ಭೂಮಿ ಚಲಿಸುತ್ತಿಲ್ಲ " ಎಂದು ಹೇಳುವಂತೆ ಒತ್ತಾಯ ಮಾಡಿದರು.
ಅವನಿಗೆ ಶಿಕ್ಷೆ ನೀಡಿದರು.
ಗೆಲಿಲಿಯೋ ಹಾಗೆ ಹೇಳಿ ಮೇಲೆ ಏಳುತ್ತಾ
"ನಾನು ಹೀಗೆ ಹೇಳಿದ್ದಕ್ಕೆ ಭೂಮಿ ಚಲನೆ ಖಂಡಿತ  ನಿಲ್ಲುವುದಿಲ್ಲ" ಎಂದು ಗೊಣಗಿದನಂತೆ.
ವಿದ್ಯೆ ಸೋತಿತೆ? 
ಜ್ಞಾನ ಏನಾಯಿತು ?

ಜ್ಞಾನ, ವಿದ್ಯೆ, ವೈಚಾರಿಕತೆ, ವಿವೇಚನೆ, ಮತ್ತು ಚಿಂತನೆ ಈ ಪದಗಳನ್ನು  ಮೇಲಿಂದ ಮೇಲೆ ಹೇಳುತ್ತೇವೆ. ಆದರೆ,
ಅವುಗಳ ನಿಜದ ಅರ್ಥದಲ್ಲಿ ಅವು ಅರಳಿ ಬಾಳಿ ಬದುಕಿ ಬಂದಿದೆಯೇ?
ವಿದ್ಯಾವಂತರು , ಚಿನ್ನದ ಪದಕ ವಿಜೇತರು , ಬುದ್ಧಿವಂತರು ಎನಿಸಿಕೊಂಡವರು  ಕೊಡುವ ಹೇಳಿಕೆಗಳು, ಮಾತನಾಡುವ ಪರಿ ನೋಡಿದಾಗ ಆಶ್ಚರ್ಯವಾಗುತ್ತದೆ.
ಒಂದು ವಿದ್ಯೆ ಪ್ರಮಾಣ ಪತ್ರ ಪದವಿ ಗಾಗಿ 
ಹೊಟ್ಟೆ ಹೊರೆದುಕೊಳ್ಳಲು. ಕೆಲಸ ಪಡೆಯಲು.
ಇನ್ನೊಂದು ಅಧ್ಯಯನ , ಸ್ನಾತಕೋತ್ತರ,
ಜ್ಞಾನಾರ್ಜನೆ , ಬೋಧನೆ, .
ಆದರೂ..
ಜ್ಞಾನಿಗಳನ್ನೂ ಸಮಾಜ ಕೆಲವೊಮ್ಮೆ ಒಪ್ಪುವುದಿಲ್ಲ,
ವಿದ್ಯಾವಂತ ತನ್ನ ಅಸಮರ್ಥತೆ ಕಾರಣ ಪ್ರಮಾಣ ಪತ್ರ ಹಿಡಿದರೂ ಮತ್ತೊಬ್ಬರನ್ನು ಬೈಯ್ಯುತ್ತಾ ಅನ್ನುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾನೆ.
ಜ್ಞಾನಿ ಗೆಲಿಲಿಯೋ ರೀತಿ ತಿರಸ್ಕಾರಕ್ಕೆ ಒಳಗಾಗುತ್ತಿರುತ್ತಾನೆ.
ತನ್ನ ಜ್ಞಾನದ ಪರಿಧಿಯನ್ನು ಅರ್ಥ ಮಾಡಿಸದೆ ವದ್ದಾಡುತ್ತಾನೆ.
ಜಗತ್ತು ಜ್ಞಾನಿಯನ್ನು ನಂಬುವುದೇ ಇಲ್ಲ.
ವಿದ್ಯಾವಂತ, ಜ್ಞಾನಿ,  ಅಲ್ಲದ ಸಾಮಾನ್ಯ ವ್ಯಕ್ತಿ 
ಗೌರವಾದರಗಳಿಗೆ ಪಾತ್ರನಾಗುತ್ತಾನೆ.
ಇದು ವಿಸ್ಮಯವೇ ಸರಿ.
ಜ್ಞಾನಿಗೆ  ವಿದ್ಯಾವಂತನಿಗೆ ಮೂಲಭೂತವಾಗಿ ಇರಬೇಕಾದದ್ದು, ವಿವೇಚನೆ.
ಲೋಕಹಿತಚಿಂತನೆ.
ox ford ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕ ಸ್ಥಾನಕ್ಕೆ ವಿದ್ಯಾಂಸರನ್ನು ಆಯ್ಕೆ ಮಾಡಬೇಕಿತ್ತು.  ಬಹಳ ಮಂದಿ ಅರ್ಜಿ ಹಾಕಿದರು.
ಇವರಲ್ಲಿ ಮ್ಯಾಕ್ಸ್ ಮುಲ್ಲರ್ ಮತ್ತು 
ವಿಂಟರ್ ನೀಟ್ಸ್ ಎಂಬ ಬಹುಶ್ರೇಷ್ಠ ವಿದ್ಯಾಂಸ ರಿದ್ದರು.
ಆಯ್ಕೆ ಸಮಿತಿ ಸಂದರ್ಶನಕ್ಕೆ ಕರೆಯಿತು. ಇಬ್ಬರಲ್ಲಿ ಒಬ್ಬರು ಆಯ್ಕೆ ಆಗಬೇಕು.
ಆಯ್ಕೆ ಸಮಿತಿ ಸಂದರ್ಶನದಲ್ಲಿ ಮ್ಯಾಕ್ಸ್ ಮುಲ್ಲರ್ ನನ್ನು " ಈ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಯಾರು ?" ಎಂದು ಕೇಳಿದಾಗ 
ಆವರು " ಹೊರಗೆ ವಿಂಟರ್ನಿಟ್ಸ್ ಕುಳಿತಿದ್ದಾರೆ ಅವರೇ ಅರ್ಹರು.
ಅವರು ಅರ್ಜಿ ಹಾಕಿದ್ದು ತಿಳಿದಿದ್ದರೆ ತಾನು ಹಾಕುತ್ತಿರಲಿಲ್ಲ " ಎಂದು ಉತ್ತರಿಸಿದರು.
ಇದೇ ಪ್ರಶ್ನೆಯನ್ನು ನಂತರ ವಿಂಟರ್ನಿಟ್ಸ್ ಅವರನ್ನು ಕೇಳಲಾಯಿತು..
ಅವರು "ಹೊರಗಡೆ ಮಾಕ್ಸ್ ಮುಲ್ಲರ್ ಕುಳಿತಿದ್ದಾರೆ ಅವರೇ ಈ ಸ್ಥಾನಕ್ಕೆ ಅರ್ಹರು"
ಎಂದು ಹೇಳಿದರು.
ಮ್ಯಾಕ್ಸ್ ಮುಲ್ಲರ್ ಹಾಗೂ ವಿಂಟರ್ನಿಟ್ಸ್ ಇಬ್ಬರೂ ವಿದ್ಯೆಯ ಜ್ಞಾನದ ಘನತೆಯನ್ನು ಮೆರೆದಿದ್ದರು. ಸಂಸ್ಕೃತಿಯ ಬೆಳಕನ್ನು ಪಸರಿಸಿದವರು,
ಸಣ್ಣತನಗಳಿಂದ ಬಿಡುಗಡೆ ಪಡೆಯುವುದೇ ನಿಜವಾದ ವಿದ್ಯೆ ಅಲ್ಲವೇ?
ಎಂದು ಪ್ರೊ ಎಲ್.ಎಸ್. ಶೇಷಗಿರಿರಾಯರು ಒಂದು ಕಡೆ ಕೇಳುತ್ತಾರೆ..
ವಿದ್ಯೆ ಬೆಳಕು ಕೊಡಬೇಕು.
ಸತ್ಯದ ದಾರಿ ತೋರಿಸಬೇಕು.
ಇಲ್ಲವಾದರೆ, ಅದು ನಿಘಂಟಿನ ಶಬ್ದದ ಹಾಗೆ,
ತಾನೇ ತಾನಾಗಿ ಬಳಕೆಗೆ ಬಾರದ ಪದದ ಹಾಗೆ, ನಿಘಂಟಿನಲ್ಲಿ ಸಾವಿರಾರು ಪದಗಳು ಇವೆ. ಆದರೆ ಒಂದರ ಜೊತೆ ಒಂದು ಬೆರೆಯದೆ ಅರ್ಥ ಬರಲಾರದಷ್ಟೇ !
ಹಾಗೇ ವಿದ್ಯೆ, ಜ್ಞಾನ,
ವಿವೇಚನೆಯ ಮುತ್ಸದ್ದಿ ಬೆಳಕು ಕಾಣದಿದ್ದರೆ 
ಅದನ್ನು ಏನನ್ನಬೇಕು?
ಯುದ್ಧ. ಚುನಾವಣೆ , ಯೋಜನೆ. ಉತ್ಸವ' ಪರೀಕ್ಷೆ ಪ್ರಮಾದ  ಏನೇ ಆದರೂ ಮಾತನಾಡಿ ತಮ್ಮದೇ ವರ್ಗ ಬೆಳೆಸುವ ಹುನ್ನಾರದಲ್ಲಿ ತೊಡಗಿರುವ " ಜ್ಞಾನಿಗಳನ್ನು " 'ಸಮಾಜ ಗುರುತಿಸಬಲ್ಲುದೇ? 
ವಿದ್ಯೆ ಜ್ಞಾನ ವಿವೇಚನೆ ಯ ನಡುವಣ ರೇಖೆಗಳು ಸ್ಪಷ್ಟವಾಗುವುದು ಹೇಗೆ?





Saturday, August 24, 2019

ನಿಮ್ಮೂರ ದಾರಿಯಲಿ..ನಮ್ಮನ್ನೇ ಹುಡುಕುತ್ತಾ.... 

ಊರು ಎನ್ನುವುದು ನಮಗೆ ಉಸಿರಿನಷ್ಟೇ ಮುಖ್ಯ. ಎಲ್ಲೇ ಇರಲಿ, ಹೇಗೆ ಇರಲಿ, ನಾವು ಆಡಿಬೆಳೆದ ನಮ್ಮೂರು ನಮಗೆ ಎಂದೂ ಚೆಂದ.

"ನಿಮ್ಮೂರು ಯಾವುದು" ಎಂದು ಶುರುವಾಗುವ ಸಂಭಾಷಣೆ,' ನಮ್ಮೂರೇ ಚಂದ 'ಎಂದು ವಾದಕ್ಕೆ ಇಳಿಯುವುದನ್ನು ಕಾಣುತ್ತೇವೆ.

ಕೇಳಿರುವ ,ಆದರೆ ನಾವು ಕಾಣದಿರುವ ಊರುಗಳ ಬಗ್ಗೆ, ಒಂದು ಅಚ್ಚರಿ, ಕುತೂಹಲ ನಮ್ಮೊಳಗೆ ಸದಾ ಜಾಗೃತ ವಾಗಿರುತ್ತದೆ.  ಊರು ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯ ಅಲ್ಲವೇ..

  ಪ್ರತಿಯೊಬ್ಬರೂ ತಮ್ಮ ಬಾಲ್ಯ ದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರು ಗಳಾಗಿ ಪೋಷಿಸಿ ನೀರೆರೆದಿರುತ್ತಾರೆ.  ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು , ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

 

"ನೀನೊಬ್ಬನೇ ಬಾರೋ ಕರೆ ತರಬೇಡ, ಕಹಿ ನೆನಪನ್ನು".. ಎಂದು ಹೆಚ್. ಎಸ್. ವೆಂಕಟೇಶ ಮೂರ್ತಿ ಅವರ ಕವನ .

ಜಾತಿ , ಕುಲ, ಊರು, ಕೇರಿ, ವಂಶಾವಳಿ ಬೇಡ .. ನೀನೊಬ್ಬ ಬೇಕು ಅಷ್ಟೇ .  

ಹೆಸರು, ಊರೂ ಕೂಡ ಬೇಡ..

ನಮ್ಮ ಬದುಕಿಗೆ ನಾವಿಕರು ನಾವೇ ಎಂಬ ಅರ್ಥದ್ದು.

ಊರು ಯಾವುದೇ ಇರಲಿ, ಅಲ್ಲಿ ಜನ , ಮನಸು , ಬಂಧನ, ಬಣ್ಣ, ಬೆವರು, ಇದೆ.

ಹಾಗಾಗಿಯೇ ನಮಗೆ ಒಂದೊಂದು ಊರು ಒಂದೊಂದು ರೀತಿ ಆಕರ್ಷಿಸುತ್ತ ದೆ.

 ಸಾಹಿತ್ಯ ದಲ್ಲಿ ಕಂಡು ಬರುವ ಊರು ಕೇರಿಗಳು,ಅವುಗಳ ಜೊತೆ ನಮ್ಮ ನಂಟು . ಇವು ಕೂಡ ಒಂದು ವಿಚಿತ್ರ ಬಂಧ.

ಕೆಲವು ಮತ್ತೆ ಮತ್ತೆ ಕಾಡುವ ಊರು ಗಳು.

ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ.

ರಾಮಾಚಾರಿ ಮತ್ತು ಚಿತ್ರದುರ್ಗ..ನೋಡಿ.

ಅವಿನಾಭಾವ ಸಂಬಂಧ.. ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ , ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ.

ರಾಮಾಚಾರಿ , ಮತ್ತು ಚಿತ್ರದುರ್ಗ ಬೇರ್ಪಡಿಸಲು ಸಾಧ್ಯವೇ.. 

ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ..

ಕೂಡಲೇ .. ನಾವು ಅರ್ಥ ಮಾಡಿಕೊಳ್ಳುತ್ತೇವೆ. . ಆಗ ಗುಣ ಗ್ರಾಹಿ ಆಗುತ್ತೇವೆ. ಚಿತ್ರದುರ್ಗ ನೋಡಿರುವವರು  ಗ್ರಹಿಸುವ ಶೈಲಿ ಬೇರೆ. ಬೆಂಗಳೂರು ಅಥವಾ ಧಾರವಾಡ ಮಂದಿ ಗ್ರಹಿಸುವ ಶೈಲಿ ಬೇರೆ.

ತ. ರಾ. ಸು. ರಾಮಾಚಾರಿ ಯನ್ನು ಬೇರೆ ಯಾವುದಾದರೂ ಜಾಗದಲ್ಲಿ ಸೃಷ್ಟಿ ಮಾಡಲು ಆಗುತ್ತಿತ್ತೆ?.

ಮಕ್ಕಳು Alice in Wonderland ಓದುವಾಗ.. ಎಚ್. ಎಸ್. ವೆಂಕಟೇಶಮೂರ್ತಿ ಕವನದ ಹಾಗೆ. ಶುಭ್ರಾತಿಶುಭ್ರ ಮನಸ್ಥಿತಿ ಯಲ್ಲಿ ಇರುತ್ತಾರೆ.

ಹ್ಯಾರಿ ಪಾಟರ್ ಓದುವಾಗ ಅನುಭವಿಸುವ ರೋಮಾಂಚನ! .. ಅದು ಯಾವ ಊರಾದರೇನು..

ಭಾಷೆ ಯಾವುದಾದರೇನು..ಹಾಗೇ..

ಮಾಲ್ಗುಡಿ ಊರನ್ನು ಯಾರೂ ನೋಡಿಲ್ಲ.

ಆದರೆ ಎಲ್ಲರೂ ನೋಡಿದ್ದಾರೆ. R K ನಾರಾಯಣ್ ತೋರಿಸಿದ ಊರು.

ಕಥೆಗೊಂದು ಊರೋ.. ಅಥವಾ. ಊರಿಗೊಂದು ಕಥೆಯೋ. .

ಊರುಭಂಗ ಮಾಡುವುದು ಕಷ್ಟ.

ಯು. ಆರ್. ಅನಂತಮೂರ್ತಿ ಅವರ ಒಂದು ಕಾದಂಬರಿ ಭಾರತೀಪುರ.

ಅವರು ಕಥೆ ಉದ್ದಕ್ಕೂ ಭಾರತೀಪುರ ಎಂದು ಹೇಳಿದರೂ .. ನಮಗೆ ಅದು ಕಲ್ಪಿತ ಊರು ಎನಿಸುವುದಿಲ್ಲ.

ಅದು ಇದೇ ಊರು ಎಂದು ಗುರುತಿಸುತ್ತೇವೆ.

ಎಷ್ಟು ವಿಚಿತ್ರ.. ಅಲ್ಲವೇ..

ಚಂದಮಾಮ ಕಥೆ ಗಳಲ್ಲಿ ಬರುವ ಮಗಧ, ಪಾಂಚಾಲ, ವಿದರ್ಭ, ಕಳಿಂಗ..

ಎಲ್ಲಾ ನಮ್ಮ ನಮ್ಮ ಊಹೆಯಂತೆ.

ಕಥೆಗಾರ ನಿಗೆ ಊರಿನ ಹಂಗು ಇದೆಯೇ..

ವಿಮರ್ಶಕ ಎಚ್. ಎಸ್. ರಾಘವೇಂದ್ರರಾವ್ ಹೇಳಿದರು..

"ಹಾಗೇನಿಲ್ಲ.. ಕಥೆಯನ್ನು ಎಲ್ಲಿ ಕುಳಿತರಲ್ಲಿ ಕಲ್ಪಿಸುವ ಹಾಗೇ ಇರಬೇಕು. ಊರು ಮತ್ತು ಪಾತ್ರ ಮಾನವೀಯ ಸಂಬಂಧ ಗಳ ನೆಲೆಗಟ್ಟಿನಲ್ಲಿ ಇದ್ದರೆ, ಸಂಬಂಧ ಸ್ರವಿಸುವ ರಸ ಮುಖ್ಯವೇ ಹೊರತು ಎಲ್ಲಿ ನಡೆಯಿತು ಎಂಬುದಲ್ಲ. ಆದರೆ ಇತಿಹಾಸ ಪ್ರಚೋದಿತ ಕೃತಿಗಳಿಗೆ ಊರು ಮುಖ್ಯ , ಎಂದರು. ನೇಮಿಚಂದ್ರ ಅವರ    

ಪೆರುವಿನ ಕಣಿವೆಯಲ್ಲಿ, ಮಾಸ್ತಿ ಅವರ ಚಿಕ್ಕ ವೀರ ರಾಜೇಂದ್ರ,  ಕೆ ವಿ. ಅಯ್ಯರ್ ಅವರ ಶಾಂತಲೆ, .. ಕಿತ್ತೂರು ರಾಣಿ ಚೆನ್ನಮ್ಮ..ಮುಂತಾದವು. ಊರೇ ಪ್ರಧಾನ ವಾದವು ಎಂಬಂತದ್ದು..

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾರಂತರ ಮೂಕಜ್ಜಿಯ ಕನಸು, ಅಥವಾ ಮರಳಿ ಮಣ್ಣಿಗೆ, ತೇಜಸ್ವಿ ಅವರ  ಕರ್ವಾಲೋ , ಇವುಗಳಲ್ಲಿ ನಾವು ಏನನ್ನು ಕಲ್ಪಿಸುತ್ತೇವೆ . ಯಾರನ್ನು ನೋಡುತ್ತೇವೆ.?

ಒಂದು ಕಥೆ ಗೆ ನಿರ್ದಿಷ್ಟ ಊರು ಗುರುತಿಸುವುದು ಲೇಖಕ.

ಓದುಗನಿಗೆ ಅದು ಎಷ್ಟು ಮುಖ್ಯ?

ನನ್ನ ಕಥೆ ಮೂಡಿಗೆರೆ ಯಲ್ಲಿ ಮಾತ್ರ ನಡೆಯುತ್ತದೆ ಎಂದು ತೇಜಸ್ವಿ ಹೇಳಿದರೆ  ಅದರ ಸಾರ್ವಭೂಮಿಕಾ ವಲಯ , ಮಿತಿಗೆ ಒಳಪಡುತ್ತದೆ. ಭೈರಪ್ಪ ಅವರ ಸಕಲೇಶಪುರ, ಸಮೀಪದ ಹೆಸರು ಹೊತ್ತ ಹಳ್ಳಿಗಳು ನಮ್ಮ ಮನದಲ್ಲಿ ಹೇಗೆ ಅರಳುತ್ತವೆ?

"ನನ್ನ ಕಾದಂಬರಿಯ ಭಾವ ಪ್ರಪಂಚಕ್ಕೆ ಸೇರಿದ ಹನೆಹಳ್ಳಿ, ದಾದರ್, ಮುಂಬೈ, ವ ಡಾಲ, ಗಿರ್ಗಂವ್, ಮೊದಲಾದ ದಿವ್ಯ ಹೆಸರು ಹೊತ್ತ ಭೂ ಪ್ರದೇಶ ಇಂದು ವಾಸ್ತವ ಜಗತ್ತಿನಲ್ಲಿ ನೋಡಲು ಸಿಗುವುದು ಒಂದು  ಅತ್ಯದ್ಭುತ ಆಕಸ್ಮಿಕ"  ಎನ್ನುತ್ತಾರೆ ಯಶವಂತ ಚಿತ್ತಾಲರು. . ಚಿಂತನೆ ವಿಸ್ತಾರ ಗೊಳ್ಳುತ್ತ ಸಾಗುತ್ತದೆ.

ಊರು ಮನುಷ್ಯ ನ ಹಾಗೇ. ಇತಿ ಮಿತಿ ಹೊತ್ತು ನಮ್ಮನ್ನು ನಡೆಸುತ್ತದೆ.

ಜಯಂತ ಕಾಯ್ಕಿಣಿ ಅವರ ಮುಂಬೈ ಕಥೆಗಳನ್ನು ಓದಿ ಆ ಪ್ರದೇಶ ನೋಡಲು 

ಹುಡುಕಿ ಹೋ ದವರು ಇದ್ದಾರೆ. ಒಮ್ಮೆ ಮುಂಬೈ ನೋಡಬೇಕು ಎಂದು ಕನವರಿಸುತ್ತಾ ಅದನ್ನು ಕಲ್ಪನೆಗೆ ಅಳವಡಿಸಿಕೊಂಡ ವರಿದ್ದಾರೆ.." ಇದೇ ಇದೇ ಅವರು ಹೇಳಿದ್ದು " ಎಂದು ಆನಂದಿಸಿದವರು ಇದ್ದಾರೆ.  ಮುಂಬೈ ಬಿಟ್ಟು ಈ ಕಥೆ ಊಹಿಸಲು ಸಾಧ್ಯವೇ..?

ಮುಲುಂಡಿಯ ಲಾಲ್ ಬಹಾದ್ದೂರ್ ರಸ್ತೆ,  ಬೆಂಗಳೂರಿನ ಗಾಯನ ಸಮಾಜ ರಸ್ತೆ ಆಗುತ್ತದೆಯೇ.? ಶಿವಾಜಿ ಪ್ರತಿಮೆ ಕೆಂಪೇಗೌಡನ ಪ್ರತಿಮೆ ಎಂದು ಊಹಿಸಲು ಆಗುತ್ತದೆಯೇ..

"ನಮಗೆ ಪಾತ್ರ ಮುಖ್ಯ, ಭಾವ ಮುಖ್ಯ" ಎಂದರು ಯುವ ಕವಯತ್ರಿ ನಾಗಶ್ರೀ.

"ಸಂವೇದನೆ ಮುಖ್ಯ ಆದಾಗ ಸ್ಥಳ ಬೇಕಾಗಿಲ್ಲ, ಅದು ಸೃಷ್ಟಿಕರ್ತನ ಕಥನ ..ಆತನ ಪ್ರಾದೇಶಿಕ ಅಗತ್ಯ "

ಎನ್ನುವುದು ಮತ್ತೋರ್ವ ಕತೆಗಾರ್ತಿ ಅನಿಸಿಕೆ. 

"ಊರೇ ಏಕೆ.. ಕಥೆಗಳಲ್ಲಿ ಬರುವ ಆಸ್ಪತ್ರೆ, ರಂಗಮಂದಿರ, theatre ಎಲ್ಲವನ್ನೂ ನಾವು ನೋಡಿರುವಂಥದ್ದಕ್ಕೆ ಕಲ್ಪಿಸು ತ್ತೇವೆ , ಬೆಟ್ಟ , ಗುಡ್ಡ, ನದಿ ಕೂಡ. ಸೌಂದರ್ಯ ಎಂದಾಗ ಅವರವರ ಕಣ್ಣಿಗೆ ಎನ್ನುತೇವಲ್ಲ, ಹಾಗೇ .. ಅಂದವರು  ಓದುಗ  ನಾಗರಾಜ್.

 ಕಥೆಯು ಊರಿನ ಒಳಗೋ.. ಊರು ಕಥೆಯ ಒಳಗೊ . ಊರು ಕಥೆ ಗಳೆರಡೂ

ನಮ್ಮೊಳಗೋ.

ನಾವು ಲೇಖಕನ ಒಳಗೋ , ಲೇಖಕ ನಮ್ಮೊಳಗೋ.. ಲೇಖಕ ನಾವು ಎರಡೂ ಊರೊಳಗೋ....ನಿಮ್ಮೂರೆ ನಮ್ಮೂರು, ನಿಮ್ಮೋರೆ ನಮ್ಮೋರು..ಎಂಬ ಆಪ್ತ ಮನಸು , ಚಿತ್ರ ಚೈತ್ರ ಮೂಡಿಸಲಿ. ವಿಶ್ವವೇ ನಮ್ಮೂರಾಗಲಿ.ನಮ್ಮೂರೇ ವಿಶ್ವ ವಾಗಲಿ.

ಇದು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ , ಪ್ರಕಟವಾದ ಬರಹ.





Saturday, March 26, 2011

ಇದು ಅಂಕಣ ಕಾಣಾ.....


ಕಣ' ಎಂದರೆ ಅತ್ಯಂತ ಸೂಕ್ಷ್ಮ ಪದಾರ್ಥ ಅಥವಾ ಅಣು ಅಂತೆ, 'ಅಂಕಣ' ಎಂದರೆ ಮನೆಯಲ್ಲಿನ ಎರಡು ಕಂಬಗಳ ನಡುವಣ ಪ್ರದೇಶ ಅಂತೆ, ಹೀಗಂತ ಕನ್ನಡ ನಿಘಂಟು ಹೇಳುತ್ತದೆ. ಇದನ್ನು ಪತ್ರಿಕೆಗಳಿಗೆ ಅನ್ವಯಿಸಿ ನೋಡುವುದಾದರೆ ಇತ್ತೀಚೆಗೆ ಪತ್ರಿಕೆಗಳ 'ಕಣವು' 'ಅಂಕಣಗಳಿಂದ' ತುಂಬಬೇಕು ಎಂಬ ಭಾವ ಎಲ್ಲೆಡೆ ಕಾಣುತ್ತಿದೆ. ಅಂಕಣಗಳಿಂದಲೇ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ನಿರ್ಧಾರವಾಗುತ್ತದೆ ಎಂಬ ಭಾವನೆ ಕೂಡ ಹುಟ್ಟುಹಾಕಲಾಗುತ್ತಿದೆ. ನಿತ್ಯ ಅದೇ ಚಡ್ಡಿ, ಯಡ್ಡಿ, ಹೊಡಿ, ಬಡಿ, ರಾಡಿ, ಚಾಡಿ ಸುದ್ದಿಗಳನ್ನು ಓದಿ ಓದಿ ಅಥವಾ ಓದಲಾರದೆ ಓದುಗ ಅಂಕಣಗಳಿಗೆ ಶರಣಾಗುತ್ತಾನೆ ಎಂಬ ಅನಿಸಿಕೆ ಕೂಡ ಇದೆ.

ಇಂದೇಕೆ ಅಂಕಣಗಳಿಗೆ ಇಷ್ಟು ಮಹತ್ವ? ಹಿಂದೆ ಅಂಕಣಗಳೇ ಇರಲಿಲ್ಲವೇ? ಅಥವಾ ಅಂಕಣಗಳನ್ನು ಜನ ಗುರುತಿಸಿರಲಿಲ್ಲವೇ? 'ಅಂಕಣ ಸಾಹಿತ್ಯ' ಸಾಧಾರಣ ಪತ್ರಿಕಾ ಸಾಹಿತ್ಯಕ್ಕಿಂತ ಭಿನ್ನವಾಗಿ ಮೂಡಿ ಬರುತ್ತಿದೆಯೇ? ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಅನ್ನುವಂತಹ ಪ್ರಶ್ನೆಗಳನ್ನು ಹಾಗೆ ಸುಮ್ಮನೆ ಅವಲೋಕನಕ್ಕೆ ಎಂದು ಕೇಳಿಕೊಂಡರೆ ಅಷ್ಟೇನೂ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಅಂತೆಯೇ... ಹಾಗೇ... ಕೆದಕಿ ಬೆದಕಿ ನೋಡಿದರೆ...

ದಶಕಗಳ ಹಿಂದೆ ಸಹ ಅಂಕಣಗಳು ಇದ್ದವು. ಹಾ.ಮಾ.ನಾಯಕರು ಪ್ರಜಾಮತಕ್ಕೆ ಬರೆಯುತ್ತಿದ್ದ ಅಂಕಣ, ಲಂಕೇಶರು ಪ್ರಜಾ ವಾಣಿ ಗೆ ಬರೆಯುತ್ತಿದ್ದ ಅಂಕಣ, ವೈ ಏನ್ ಕೆ, ಕಾರಂತರು, ವೈಕುಂಠರಾಜು, ಎಂ ವಿ ಕಾಮತ್, ರಾಮಚಂದ್ರ ರಾಯರು, ಸ ಕ್ರ ಪ್ರಕಾಶ್ ಇವರೆಲ್ಲರ ಅಂಕಣಗಳು ಮನಸ್ಸಿನಲ್ಲಿ ಸುಳಿದು ಹೋಗುತ್ತವೆ. 'ಸುಧಾ' ವಾರಪತ್ರಿಕೆಯಲ್ಲಿ ಬರುತ್ತಿದ್ದ 'ಕಾಮಧೇನು', 'ನೀವು ಕೇಳಿದಿರಿ' ಅಂಕಣಗಳು ಲಂಕೇಶ್ ಪತ್ರಿಕೆಗೆ ತೇಜಸ್ವಿ ಬರೆಯುತ್ತಿದ್ದ ಅಂಕಣ ಮರೆಯುವ ಹಾಗೆಯೇ ಇಲ್ಲ.

ಅಂಕಣಗಳು ನಿರ್ದಿಷ್ಟತೆ, ಸ್ವರೂಪ, ವಿಸ್ತಾರ, ಗುರಿ ಮತ್ತು ಬದ್ಧತೆಯನ್ನು ಹೊಂದಿರುತ್ತಿದ್ದವು. ಕೆಲವು 'ರಾಜಕೀಯ'ಕ್ಕಾಗಿಯೇ ಮೀಸಲಾದವು. ಇನ್ನು ಕೆಲವು ಪಕ್ಕಾ ವಿಡಂಬನೆಗಳು. ಇನ್ನು ಕೆಲವು ಪ್ರಶ್ನೋತ್ತರ ರೂಪದವು. ಮತ್ತೂ ಕೆಲವು ಸಾಂಸ್ಕೃತಿಕ ಲೋಕ, ಚಿತ್ರ ಲೋಕಕ್ಕೆ ಸಂಬಂಧ ಪಟ್ಟ ಅಂಥವು. ಅಂದರೆ ಅಂಕಣಗಳಿಗೆ ಹೆಸರು, ರೂಪ, ವಿಷಯ, ಇರುತ್ತಿತ್ತು. 'ಬರೆದವರು ಯಾರು' ಎನ್ನುವುದಕ್ಕಿಂತ ವಸ್ತು ವಿಷಯಕ್ಕೆ ಹೆಚ್ಚು ಸೆಳೆತ ಇರುತ್ತಿತ್ತು. 'ವಿಷಯ ಕೇಂದ್ರಿತ' ಅಂಕಣಗಳು ಕೆಲವಾದರೆ, 'ವ್ಯಕ್ತಿ ಕೇಂದ್ರಿತ' ಅಂಕಣಗಳೂ ಕೆಲವು. ವ್ಯಕ್ತಿ ಕೇಂದ್ರಿತ ಅಂಕಣಗಳಲ್ಲಿ ಈ ಬಾರಿ ಈತ ಏನೆನ್ನುತ್ತಾನೆ ಎಂಬ ಕುತೂಹಲ ಇರುತ್ತಿತ್ತು. ವ್ಯಕ್ತಿ ಕೇಂದ್ರಿತ ಅಂಕಣಗಳೂ ಸಹ, ಯಾವುದಾದರೂ ಸಾಮಾನ್ಯ ಪ್ರಚಲಿತ ವಿಚಾರಗಳ ಬಗ್ಗೆ ಬೆಳಕು ಬೀರುವ, ಪ್ರಜ್ಞಾದೀಪ ಹೊತ್ತಿಸುವ, ಮಂಥನ ನಡೆಸುವ ಪ್ರಣಾಳಿಕೆ ಹೊತ್ತಿರುತ್ತಿದ್ದವು.

ಕೆಲವು ಅಂಕಣಗಳು ಪತ್ರಕರ್ತರು ಖುದ್ದು ಬರೆಯುವುದು, ಮತ್ತೆ ಕೆಲವು ಇತರರಿಂದ ಬರೆಸುವುದು. ಪತ್ರಕರ್ತರು ಸದಾ ಅಖಾಡದಲ್ಲಿ ಇರುತ್ತಾರಾದ್ದರಿಂದ, ನಿರಂತರ ಸುದ್ದಿಮನೆಯ ಆಗು ಹೋಗುಗಳು ಅವರ ಗಮನಕ್ಕೆ ಬರುತ್ತದೆ ಆದ್ದರಿಂದ ಆಯಾ ವಾರದ ಸುದ್ದಿ ಹರಿವು ಆಸಕ್ತಿ, ಅರ್ಥ ಮಾಡಿಕೊಂಡು ಬರೆಯಬಲ್ಲರು. ಜನರ ನಾಡಿಯನ್ನು ಮಿಡಿಯಬಲ್ಲರು ಎನ್ನುವಂಥದ್ದು ಇತ್ತು. ಇತರರು ಅಂಕಣದ ಜವಾಬ್ದಾರಿ ಹೊತ್ತಾಗ ಅವರು ವಿಚಾರದ ಆಯ್ಕೆ ಮಾಡಿಕೊಂಡು, ಸಂಶೋಧನೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸೇರಿಸಿ, ಕ್ರೋಡೀಕರಿಸಿ ಬರೆಯುವಂಥದ್ದಾಗಿರುತ್ತಿತ್ತು. ಕೆಲವೊಮ್ಮೆ ಆ ವಿಚಾರ ಮಂಡನೆಯ ಶೈಲಿಗೆ ಅಥವಾ ಪ್ರಚಲಿತದ ವಿಮರ್ಶೆಗೆ, ಪ್ರಸಕ್ತದ ಅರ್ಥ ಮಾಡಿಕೊಳ್ಳುವಿಕೆಗೆ, ಅಂಕಣಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಿದ್ದರು.

ಪಂಚೆ ಧರಿಸುವವರು ಪ್ಯಾಂಟ್, ಜೀನ್ಸ್ ಪ್ಯಾಂಟ್ ತೊಡಲು ಆರಂಭಿಸಿದರು. ಸೀರೆ ಸಲ್ವಾರ್ ಕಮೀಜ್ ಆಯಿತು. ಸಲ್ವಾರ್ ಹೋಗಿ ಮಿನಿ skirt ಬಂತು...

ಕಾಲ ಬದಲಾದ ಹಾಗೆಲ್ಲ ಪತ್ರಿಕೆಗಳೂ ಬದಲಾದವು. ನಾವಿನ್ಯತೆ ಪಡೆದವು. ಮಾಧ್ಯಮ ಉದ್ಯಮ ಆಯಿತು. ಪತ್ರಿಕೆ ಸರಕಾಯಿತು. ಅಂಕಣ ಅಂಕೆ ಮೀರಿತು. ಸಿನಿಮಾ ನಲ್ಲಿನ item song ನ ರೀತಿ ಪತ್ರಿಕೆಗೊಂದು ಅಂಕಣ! ಅದು ವಿಷಯ, ವಾದ, ಪ್ರತಿವಾದ, ಪೂರ್ವ ನಿರ್ಧಾರಿತ ಅಂಶಗಳು, ಸೆಳೆತಗಳು, ಸುಳಿವುಗಳು, ಎಲ್ಲವನ್ನು ಒಳಗೊಂಡಿರುತ್ತದೆ!! ವಾರದ ಅಂಕಣಗಳು, ನಿತ್ಯದ ಅಂಕಣಗಳು, ಸಿನಿಮಾ, ಉದ್ಯೋಗಪುಟಗಳಲ್ಲೂ ಅಂಕಣಗಳು, ವ್ಯಕ್ತಿತ್ವ ವಿಕಾಸನಕ್ಕಾಗಿಯೇ ಅಂಕಣಗಳು... ಅಂಕಣಗಳು ಹೊಸ ರೂಪ ಪಡೆದದ್ದು ನಿಜ. ಬಣ್ಣದ ಸೀರೆ ಉಟ್ಟು ತಂತ್ರಜ್ಞಾನದ ರವಿಕೆ ತೊಟ್ಟು ಅಂದ ಚಂದದ ಮೇಕ್-ಅಪ್ ಧರಿಸಿ ಅನುಭವದ ರಸ ಸಾರ ಕೊಡಲು ಬಂದ ಈ ಅಂಕಣಾoಗನೆಯನ್ನು ಕಂಡು ಓದುಗರು thrill ಆದದ್ದು ನಿಜ. ಆದರೆ...

ಆದರೆ, ಯವ್ವನ ಕಳೆದು ಮುಪ್ಪು ಅಡರುವಂತೆ ಅಂಕಣಗಳು ಹೊಳಪು ಕಳೆದುಕೊಳ್ಳುತ್ತಿವೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಅಂಕಣಗಳು ಈಗೀಗ ಯಾರನ್ನು ಮುಟ್ಟುತ್ತಿವೆ? ಅಂಕಣಗಳು ನಿಜವಾಗಿ ಅಂಕಣಗಳಾಗಿವೆಯೇ? ತಾಜಾತನವನ್ನು ಉಳಿಸಿಕೊಳ್ಳುತ್ತಿವೆಯೇ? ನಿಜವಾಗಿ ಓದುಗ ಅಂಕಣಕ್ಕಾಗಿ ಕಾಯುತ್ತಾನೆಯೇ? ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ, ಯಾಕಾಗಿ ಬರೆಯುತ್ತಿದ್ದೇವೆ ಎಂಬುದನ್ನು ಅಂಕಣಕಾರರು ಯೋಚಿಸುತ್ತಿದ್ದಾರೆಯೇ?

ಒಬ್ಬ ಕ್ರಿಕೆಟ್ ಆಟಗಾರ ಸತತ ಐದಾರು ಮ್ಯಾಚ್ ನಲ್ಲಿ ರನ್ ಹೊಡೆಯದಿದ್ದರೆ ಪಾಪ! ಅವನನ್ನು ಮನಬಂದಂತೆ ಬೈಯುತ್ತೇವೆ. ಟೀಂ ನಿಂದ ಕಿತ್ತುಹಾಕಬೇಕು ಎನ್ನುತ್ತೇವೆ. ಹಾಡುಗಾರ ತನ್ನ ವಯೋಧರ್ಮಕ್ಕೆ ತಲೆಬಾಗುತ್ತಿದ್ದಾಗ ಶಕ್ತಿ ಕುಂದಿ ಶ್ರುತಿ ತಪ್ಪಿದರೆ, ಆತ ಸ್ವಯಂ ನಿವೃತ್ತಿ ಪಡೆಯಬೇಕು 'ಕೇಳನೋ ಹರಿ, ತಾಳನೋ' ಎಂದು ಸಂಗೀತ ವಿಮರ್ಶಕರು ಬರೆದುಬಿಡುತ್ತಾರೆ. ಲೋಕಾರ್ಪಣೆಗೊಳ್ಳುವ ಪುಸ್ತಕಗಳ ಬಗ್ಗೆ ಪುಟಗಟ್ಟಲೆ ವಿಮರ್ಶೆಗಳು ಬರುತ್ತವೆ. ಮಾಧ್ಯಮ ಸಾಗುತ್ತಿರುವ ಬಗೆ ವಿವರಿಸಲು ನೂರಾರು ಬ್ಲಾಗ್ ಗಳು, ಚರ್ಚೆಗಳು, ಲೇಖನಗಳು, ಮಂಥನಗಳು ನಡೆದಿವೆ. ಆದರೆ ಈ ಅಂಕಣ ಸಾಹಿತ್ಯ ಯಾರ ಕೈಗೂ ಸಿಗದೇ ನುಸುಳಿ ಹೋಗುತ್ತಿದೆ.

ಸಾರವೇ ಇಲ್ಲದ ಅಂಕಣಗಳು ಹೆಚ್ಚಾಗುತ್ತಿವೆ. 'ನಾನು' ಕೇಂದ್ರಿತ ಅಂಕಣಗಳೇ ಹೆಚ್ಚಾಗುತ್ತಿವೆ. ಸಾಮಾಜಿಕ ವಿಷಯಗಳನ್ನು ಹೊತ್ತ ಅಂಕಣಗಳು ಮಾಯವಾಗುತ್ತಿವೆ. ತಾನು ಓದಿದ ಪುಸ್ತಕ. ತಾನು ಹೋದ ಸಭೆ-ಸಮಾರಂಭ, ತನ್ನ ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗಿದ್ದು, ಇಂತಹ ಸ್ವ-ಪುರಾಣಗಳು ಅಂಕಣಗಳಲ್ಲಿ ಕಾಣುತ್ತಿವೆ. ಇವು ಆತ್ಮಕಥನಗಳೂ ಅಲ್ಲ, ಗಟ್ಟಿತನವಿರುವ 'ನಾನೂ' ಅಲ್ಲ. ಸುದ್ದಿಯಲ್ಲಿರಬೇಕೆಂದು ಬಯಸಿ ವಿವಾದ ಮಾಡುವ ರಾಜಕಾರಣಿಯಂತೆ, ಪ್ರಚಾರದ ಆಸೆಗೆ gossip ಮಾಡುವ ನಟ ನಟಿಯರಂತೆ ವಾರಕ್ಕೊಮ್ಮೆ ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕು ಎನ್ನುವ ಮೋಹಕ್ಕೆ ಅಂಕಣಕಾರ ಬೀಳುತ್ತಿದ್ದಾನೆ. ಅಂಕಣ, ವಿಷಯವನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತದೆ. ಅಂಕಣ ಒಂದು ಮೋಹಕ್ಕೆ ತಿರುಗಿದಾಗ ಸಂಪಾದಕರೂ ಏನೂ ಮಾಡಲಾರರು.

ಮೊದಮೊದಲು ಪ್ರತಿ ಪದವನ್ನೂ ಓದುತಿದ್ದ ಓದುಗ, ನಂತರ, ವಾಕ್ಯಗಳ ಮೇಲೆ ಕಣ್ಣಾಡಿಸುತ್ತಾನೆ. ನಂತರ ಪ್ಯಾರ ಎಗರಿಸಿ ಓದುತ್ತಾನೆ. ಬರುಬರುತ್ತಾ ಶೀರ್ಷಿಕೆ ಓದಿಯೇ ಅಂಕಣಕಾರನನ್ನು ಗ್ರಹಿಸಿ ಬಿಡುತ್ತಾನೆ. ಓದುಗ ಶೀರ್ಷಿಕೆ ಕೂಡ ಓದಲಾರದ ಮಟ್ಟಕ್ಕೆ ಬರುವ ಮೊದಲು ಅಂಕಣಕಾರ ಎಚ್ಚೆತ್ತುಕೊಂಡರೆ ಒಳಿತು.
ಸಂಪಾದಕರು ಅವರನ್ನು ತಮ್ಮ ಪತ್ರಿಕೆಗೆ ಬರೆಸಲು ಎಷ್ಟು ಶ್ರಮ ಪಡುತ್ತಾರೋ ಅವರನ್ನು ಪತ್ರಿಕೆಯಿಂದ ಬಿಡಿಸಲೂ ಕೂಡ ಅಷ್ಟೇ ಶ್ರಮ ಪಡಬೇಕಾಗುತ್ತದೆ. ಸರಸ ಸಲ್ಲಾಪ, ಪ್ರಲಾಪಕ್ಕೆ ತಿರುಗಿ ಬಿಡುತ್ತದೆ. ಅಂಕಣಕಾರ ಇನ್ನು ಹದಿನಾರು ಅಂಕಣ ಬರೆದರೆ 'ಐದನೇ ಪುಸ್ತಕ' ಸಿದ್ಧ ಎಂದು ಪ್ರಕಾಶಕರ ಮನೆ ಅಲೆಯುತ್ತಿರುತ್ತಾನೆ, ಸಂಪಾದಕ ಸುಸ್ತಾಗಿರುತ್ತಾನೆ, ಓದುಗ ಉಕ್ಕಿ ಬರುವ ನಗು ತಡೆಯುತ್ತಿರುತ್ತಾನೆ.

ಕೆಲವೊಮ್ಮೆ ಸಂಪಾದಕರೂ ತಮ್ಮ ಸ್ವಹಿತಕ್ಕೆ, ಅಪೇಕ್ಷಿತ ಲಾಭಗಳಿಗೆ, ಸ್ನೇಹಿತರಿಗೆ ಪ್ರಚಾರ ಕೊಡುವುದಕ್ಕೆ, ಅಂಕಣಕಾರರಿಗೆ ಪ್ರೋತ್ಸಾಹಿಸುವುದು ಉಂಟು. ಅಂಕಣಗಳು ವಿಷಯ ಪ್ರಧಾನವಾದಾಗ ಮೂಡಿ ಬರುವ ರೀತಿಯೇ ಬೇರೆ. ಬೆಂಗಳೂರಿನ ಬಗ್ಗೆ ಪತ್ರಿಕೆಯೊಂದರಲ್ಲಿ ಅಂಕಣ ಮೂಡಿ ಬಂತು. ಸಂಗೀತದ ರಾಗಗಳ ಬಗ್ಗೆ, ಸುದ್ದಿ ಮನೆಯ ವಿಚಾರಗಳನ್ನು ತಿಳಿಸುವ ಬಗ್ಗೆ, ವಿಜ್ಞಾನಿಗಳ ಜೀವನ ಚರಿತ್ರೆ, ಮರೆಯಾದ ಲೇಖಕಿಯರು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀ ವಿಚಾರಧಾರೆ, ಸಾಹಿತ್ಯ ನಡೆದು ಬಂದ ದಾರಿ, ಇಂತಹ ಅಂಕಣಗಳು ನಿರಂತರ ಕುತೂಹಲ ಉಳಿಸಿಕೊಳ್ಳುತ್ತವೆ. ಬರೆಯುವವ ಯಾರೇ ಇದ್ದರೂ ವಿಷಯದ ಸೆಳೆತ ಅಲ್ಲಿರುತ್ತದೆ. ರಾಜಕೀಯ ಅಂಕಣಗಳು ಪ್ರಸ್ತುತತೆ ಇಂದ ಜೀವಂತಿಕೆ, ಕಾಪಾಡಿಕೊಳ್ಳುತ್ತವೆ. ಆದರೆ ಕೆಲವು ಅಂಕಣಗಳು ಸ್ಟಾರ್-ಗಿರಿ ಇಂದಲೇ ಓಡಬೇಕು. ಕನ್ನಡ ಬಾರದ ನಟ-ನಟಿಯರನ್ನು ಆರಿಸಿ, ಕರೆಸಿ, dubbing ಕೊಟ್ಟು ಪಾತ್ರ ಮಾಡಿಸಿದ ಹಾಗೇ. ಅವರಿಗೆ ಅಕ್ಷರ ಗೊತ್ತೋ, ಬರೆಯಲು ಬರುತ್ತದೋ, ಇಲ್ಲವೋ, ಕೇಳುವ ಹಾಗೆಯೇ ಇಲ್ಲ. ಮತ್ತೆ ಕೆಲವರು ಬರೆಯುವ/ ಓದುವ ಗೋಜು ಬೇಡ ಎಂದು ನಿರೂಪಣೆಗೆ ಒಗ್ಗಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, ಮತ್ತೊಬ್ಬರು ಬರೆಯುತ್ತಾರೆ.

ಆದರೆ, ವಿಷಾದವೆಂದರೆ ಅಂಕಣಕಾರರು 'ಖಾಲಿ' ಆಗುವುದು. ಅದಕ್ಕಿಂತ ಇನ್ನೂ ದುಃಖದ ಸಂಗತಿ ಎಂದರೆ ತುಂಬಿಕೊಳ್ಳದಿರುವುದು. ಅಂಕಣಗಳು ಚನ್ನಾಗಿ ಮೂಡಿ ಬರಬೇಕಾದರೆ ಪತ್ರಿಕಾ ಸಂಪಾದಕರು ಒಬ್ಬ ಅಂಕಣಕಾರನಿಗೆ 'ನಿರ್ದಿಷ್ಟ ಅವಧಿಗೆ' ಮಾತ್ರ ಬರೆಯಲು ಹೇಳಬೇಕು. ವಿಷಯವನ್ನು ಸೂಚಿಸಬೇಕು. ಬಿಡುಗಡೆಯಾಗುವ ಪುಸ್ತಕಗಳ ವಿಮರ್ಶೆ, ಟಾಪ್ ಟೆನ್ ಬರುವ ಹಾಗೆ, TV ಗಳಲ್ಲಿ serial ಗಳಿಗೆ TRP ಇದ್ದಹಾಗೆ, ಚಿತ್ರಗೀತೆಗಳಲ್ಲಿ ಸೂಪರ್ ಹಿಟ್ ಇದ್ದ ಹಾಗೆ, ಎಲ್ಲ ಪತ್ರಿಕೆಗಳ ಎಲ್ಲ ಅಂಕಣಗಳ ಮೌಲ್ಯ ಮಾಪನ ನಡೆಯಬೇಕು. ಟಾಪ್ ಟೆನ್ ಅಂಕಣಗಳು ಯಾವುವು ಎನ್ನುವಂಥ ಚರ್ಚೆಗಳು ನಡೆಯಬೇಕು. ಆಗ ಅಂಕಣಕಾರರು ಮತ್ತು ಸಂಪಾದಕರು ಎಚ್ಚೆತ್ತುಕೊಳ್ಳುತ್ತಾರೆ. ಓದುಗ ನಿರಾಳವಾಗಿ ಉಸಿರಾಡುತ್ತಾನೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

ಈಗ ಹೇಳಿ, ಪತ್ರಿಕೆಗಳ ಪ್ರಸಾರ, ಅಂಕಣಗಳಿಂದ ಹೆಚ್ಚಾಗುತ್ತವೆಯೇ?

*****

Wednesday, September 15, 2010

ಮಾರೋದು ಹೀಗಾ?

ಮಾರೋದು ಹೀಗಾ?

ಇತ್ತೀಚೆಗೆ ನಮಗೆ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿವೆ. ಪ್ರಶ್ನೆಗಳೇ ಇಲ್ಲದಿದ್ದರೂ ನಿಮ್ಮ ಮನದೊಳಗೆ ಬಂದು `ವಿಶೇಷ', `ವಿಭಿನ್ನ' ಪ್ರಶ್ನೆಯ ಹುಳು ಬಿಟ್ಟು, ಅದಕ್ಕೆ ಉತ್ತರ ಕೊಟ್ಟು ಅವರೇ ಕೃತಾರ್ಥರಾಗುತ್ತಾರೆ.

ನಡೆಯುವುದು ಹೀಗೆ, ಮಾತನಾಡುವುದು ಹೀಗೆ, ಓಢಾಡುವುದು ಹೀಗೆ, ನಗುವುದು ಹೀಗೆ, ನಿಲ್ಲುವುದು ಹೀಗೆ, ಎಡಕ್ಕೆ ತಿರುಗಿ ಒರೆನೋಟ ಬೀರಿದರೆ ಏನಾಗುತ್ತದೆ, ಬಲಕ್ಕೆ ತಿರುಗಿ ಕಣ್ಣು ಹೊಡೆದರೆ ಹೇಗಿರುತ್ತದೆ, ಯಾವುದು ಪರಿಣಾಮಕಾರಿ ಎಂದೆಲ್ಲಾ ತಿಳಿಸಲು ಅನೇಕ ಪುಸ್ತಕಗಳು, ಪ್ರಶ್ನೋತ್ತರ ಮಾಲಿಕೆಗಳು, ಸಿದ್ಧ ಪಾಠಗಳು ಸಿಗುತ್ತಿವೆ. ಜೊತೆಗೆ ಓದುವುದು ಹೇಗೆ, ಬರೆಯುವುದು ಹೇಗೆ, ದುಡ್ಡು ಮಾಡುವುದು ಹೇಗೆ ಇಂತಹ series ತುಂಬಾ ಮಹತ್ವ ಬಂದಿದೆ. ಮೊನ್ನೆ ಪ್ರಕಾಶಕರೊಬ್ಬರು ಹೇಳುತ್ತಿದ್ದರು. ಇಪ್ಪತ್ತೈದು ಮೂವತ್ತು ರೂಪಾಯಿಗಳಿಗೆ ಪ್ರಕಟವಾಗುವ ಪುಟ್ಟ ಪುಟ್ಟ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಈಗ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಆರೋಗ್ಯ ಪುಸ್ತಕಗಳು ಮತ್ತು `ಹೇಗೆ' series ಪುಸ್ತಕಗಳು ಎಂದು.

ಐದಾರು ವರ್ಷಗಳಿಂದ ಇಂಥ ಲೇಖನಗಳು ಪ್ರತಿ ಪತ್ರಿಕೆಯಲ್ಲೂ ಬರುತ್ತಿವೆ. ಪತ್ರಿಕೆಯಲ್ಲಿ ಪ್ರಕಟವಾದ ಸಂಗ್ರಹವಾದ ಸಂಗ್ರಹ ರೂಪಗಳು ಪುಸ್ತಕ ಮೂಲಕ ಲಭ್ಯ. ಇಂಥ ಪುಸ್ತಕಗಳು, ಲೇಖನಗಳು ಬಹುಶಃ ಯಾವುದೇ ವಿಚಾರದಲ್ಲಿ ಪ್ರಾಥಮಿಕ ತಿಳಿವಳಿಕೆ ಕೊಡುತ್ತವೆ, ಕುತೂಹಲ ಹುಟ್ಟಿಸುತ್ತವೆ, ಆಸಕ್ತಿ ಮೂಡಿಸಿ ಮುಂದಿನ ದಾರಿ ಸುಗಮ ಮಾಡುತ್ತವೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಇವು ಬರುತ್ತಿರುವ ಭರಾಟೆ, ಅಬ್ಬರ, ಗುಣಮಟ್ಟ, ಇವೆಲ್ಲ ಅಸಹ್ಯ ಹುಟ್ಟಿಸುವ ಹಾಗಿದೆ. ಇಂತಹ ಲೇಖನಗಳನ್ನು ಬರೆಯುವವರು ಯಾರು? ಅವರ ಅರ್ಹತೆ, ಜ್ಞಾನ ಒಂದೂ ಮಾನ್ಯವಲ್ಲವೇನೋ ಎಂಬ ಸಂಶಯವೂ ಕೆಲವು ಸಲ ಕಾಡುತ್ತದೆ. ಮೊನ್ನೆ ಗುತ್ತಿಗೆದಾರರೊಬ್ಬರು ಹೇಳುತ್ತಿದ್ದರು - `ಕಾಂಟ್ರಾಕ್ಟ್ ಬೇರೆ, ಮೇಸ್ತ್ರೀ ಬೇರೆ, ಕಾಂಟ್ರಾಕ್ಟರ್ಗೆ ಕರಣಿ ಹಿಡಿಯಲು ಬರಬೇಕಿಲ್ಲ.'
ಇವೆಲ್ಲಾ ಹಣ ಮಾಡುವ ಉದ್ಯೋಗಗಳು ಅಷ್ಟೆ. ಯಾವ ಊರಿನಲ್ಲಿ ಎಷ್ಟು ಕ್ಯಾಂಪ್ ನಡೆಸಬಹುದು, ಯಾವ ವಿಷಯಕ್ಕೆ ಅಸಕ್ತಿಯುಳ್ಳ ಜನರಿದ್ದಾರೆ ಎಂಬಂಥ ಅಂಶಗಳನ್ನು ಕಲೆ ಹಾಕಿ, ಸೂಕ್ತ ಪ್ರಚಾರ ಕೊಟ್ಟು, ಒಂದಷ್ಟು ವಿಷಯ ತಿಳಿಸಿದರೆ ಸಾಕು ಹೊಟ್ಟೆಪಾಡು ನಡೆಯುತ್ತದೆ. `ನಾನೇನು ನನ್ನ ಯೋಗ್ಯತೆ ಏನು, ಓದಿದಂತೆ, ಅಥವಾ ನುಡಿದಂತೆ ನಡೆಯುತ್ತೇನಾ' ಎಂಬೆಲ್ಲ ವಿಚಾರಗಳು ಯಾರಿಗೆ ಬೇಕು? ಅಸಲು ಯಾರಾದರೂ ಒಳ್ಳೆಯದನ್ನು ಹೇಳಿದಾಗ `ವಿಷಯವನ್ನು' ಗ್ರಹಿಸಬೇಕೇ ಹೊರತು `ವ್ಯಕ್ತಿಯನ್ನೇಕೆ ನೋಡಬೇಕು ಎಂಬ ವಾದವೂ ಇದೆ. ಹಾಗಾಗಿಯೇ ಇಂದು ವ್ಯಕ್ತಿಗಳು ಸಿಗುವುದಿಲ್ಲ, ವಿಷಯಗಳು ಸಿಗುತ್ತವೆ.

ಹೊಟ್ಟೆಪಾಡು ಮತ್ತು ಮಾರ್ಕೆಟಿಂಗ್ ಮಧ್ಯೆ ನಾವು ಕಳೆದು ಹೋಗುತ್ತಿಲ್ಲವೇ? ಹೃದಯದ ಪಾಡೇನು? ಮನಸ್ಸಿನ ಪಾಡೇನು? ಮನಸ್ಸು, ಹೃದಯ ಇಲ್ಲದ ಸಮಾಜದ ಪಾಡೇನು? ಮನಸ್ಸಿನ ಮಾತುಗಳನ್ನು ಪೂರ್ತಿಯಾಗಿ ಆಡಬೇಡಿ. ತಡೆಯಿರಿ. ಎದುರುಗಡೆ ಯಾರಿದ್ದಾರೆಂದು ನೋಡಿ ಅವರಿಗೆ ತಕ್ಕ ಹಾಗೆ ವರ್ತಿಸಿ . ಕಣ್ಣುಗಳನ್ನು ಹೀಗೇ ಮಿಟುಕಿಸಿ. ಕೈಕಾಲುಗಳನ್ನು ಹೀಗೇ ಆಡಿಸಿ. ಇಂತಹುದನ್ನು ಓದುತ್ತಾ ಓದುತ್ತಾಬೆಳೆಸಿಕೊಂಡ ನಮ್ಮ ವರ್ತನೆಗಳು ನಿಜಕ್ಕೂ ಅಂತರಂಗವನ್ನು ಅರಳಿಸುತ್ತವೆಯೇ?
ನಾವು ಮುದ್ದಾಗಿ ಕಾಣುವ , ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು ಬರುವ ಒಂದು ವರ್ಗವನ್ನು ಸೃಷ್ಟಿ ಮಾಡುತ್ತಿಲ್ಲವೇ? ಅಕಸ್ಮಾತ್ ದಾರಿಯಲ್ಲಿ ಬಿದ್ದುಬಿಟ್ಟರೆ ತಾವಾಗಿಯೇ ಏಳುವುದು ಹೇಗೆಂದು ಇವರಿಗೆ ತೊಚುವುದಿಲ್ಲ. ಏಕೆಂದರೆ `ಬಿದ್ದಾಗ ಏಳುವುದು ಹೇಗೆ?' ಎಂಬ ಪುಸ್ತಕ ಪ್ರಕಟವಾಗದೇ ಇರುವುದರಿಂದ ಇವರು ಅದನ್ನು ಓದಿರುವುದಿಲ್ಲ. ಹಾಗೇ ಯಾರಾದರೂ ಬಿದ್ದಾಗ, ಅವರ ಬಳಿ ಹೋಗಿ ಕಾಪಾಡ ಬೇಕೆನ್ನುವುದೂ ಇವರಿಗೆ ತಿಳಿಯಲಾರದು. ಅದು ಅವರ ತಪ್ಪಲ್ಲ.
ಮೊನ್ನೆ ಹದಿನೆಂಟರ ಯುವತಿಯೊಬ್ಬಳು , ತಾನು ಮಾಡಿದ ತಪ್ಪಿಗೆ ನಗನಗುತ್ತಾ ಸಾರಿ ಕೇಳಿದಳು. ತಪ್ಪು ಮಾಡಿದಾಗ ಸಾರಿ ಕೇಳಿ ಎಂಬುದು ವ್ಯಕ್ತಿತ್ವ ವಿಕಸನದ ಪಾಠ. ಹಾಗಾಗಿ ಆ ಸಾರಿಯಲ್ಲಿ ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ. ಮರುದಿನ ಪುನಃ ಅದೇ ತಪ್ಪು! ಅದೇ ಸಾರೀ! ಅದೇ ನಗು! ಬೇಕೆಂದೇ ಕೈಕಾಲುಗಳನ್ನು ಆಡಿಸುತ್ತ, ಕಣ್ಣು ಮಿಟುಕಿಸುತ್ತಾ, ಬಲವಂತವಾಗಿ ನಗುವ, ಎಲ್ಲರನ್ನೂ ಇಂಪ್ರೆಸ್ ಮಡಲು ಹೊರಡುವ ಈ `ವಿಕಾಸದ ಕೂಸು'ಗಳನ್ನು ನೋಡಿಧಾಗ ಮರುಕವೆನಿಸುತ್ತದೆ.
ಗಮನಿಸಿ ನೋಡಿ , ಎಲ್ಲ ವ್ಯಕ್ತಿತ್ವ ವಿಕಸನ ಪುಸ್ತಕ ಪಾಠ, ಪ್ರವಚನಾದಿಗಳು ಹೇಳುವುದು `ನಾನು' ಬಗ್ಗೆ. ನನ್ನ ಸಂತೋಷ, ನನ್ನ ವ್ಯಕ್ತಿತ್ವ, ನನ್ನ ಉನ್ನತಿ ಮತ್ತು ನಾನೇ ನಂಬರ್ ಒನ್ ಆಗಬೇಕೆಂಬ ಮೂಲಮಂತ್ರ. ನಾವು ಸಮಷ್ಟಿಯಲ್ಲಿ ಬಂದವರು, ಇತರರಿಂದ ನಾವು, ಸಮಾಜದಿಂದ ನಾವು, ನಾವು ಇಂಪ್ರೆಸ್ ಮಾಡಬೇಕಾಗಿರುವುದು ನಮ್ಮ ಜ್ಞಾನದಿಂದ ಮಾಡುವ ಕೆಲಸಗಳಿಂದ ಹಾವ-ಭಾವಗಳಿಂದ ಅಲ್ಲ ಎಂಬುದನ್ನು ವಿಕಾಸದ ಪಾಠ ಓದಿದವರಿಗೆ ಹೇಳಲು ಆಗುವುದೇ ಇಲ್ಲ.
ಸಾಲು ಮರದ ತಿಮ್ಮಕ್ಕನಿಗೆ ಗೊತ್ತಿಲ್ಲ. ಆಕೆಗೆ ತಾನು ನಂ.1 ಆಗಬೇಕು ಎಂಬ ಗುರಿಯೂ ಇರಲಿಲ್ಲ. ತನ್ನ ಸಹಜ ಅಂತರಂಗದ ತುಡಿತಕ್ಕೆ ಕೆಲಸ ಮಾಡಿದಳು. ನಮಗೆ ನಂ.1 ಜೊತೆ ಸ್ಪರ್ಧೆ ಬೇಕೋ ನಮ್ಮ ಸಹಜದ ಆನಂದ ಬೇಕೋ ಎಂಬ ನಿರ್ಧಾರ ನಮ್ಮದೆ ಅಲ್ಲವೇ? ಆಡಂಬರ, ಅಸಹಜತೆ, ಅಬ್ಬರ ಬೇಕೆ? ಮನಸ್ಸಿನ ಜ್ಞಾನ ಅನುಭವಗಳಿಂದ ಬಂದ ತಿಳುವಳಿಕೆಗಳು ವ್ಯಕ್ತಿಯನ್ನು ವಿಕಾಸದೆಡೆಗೆ ಕರೆದೊಯ್ಯುತ್ತವೆ. ಅಂತರಾತ್ಮ ಶುದ್ಧ ಆನಂದದಿಂದ ಅರಳಿದರೆ, ಕಣ್ಣುಗಳಲ್ಲಿ ಆ ಪ್ರಭೆ ತಾನಾಗಿಯೇ ಗೋಚರಿಸುತ್ತದೆ. ಹಾಗಾಗಿ ಗುರಿ ಜ್ಞಾನದೆಡೆಗೆ ಇರಲಿ, ಉತ್ತಮವಾದುದಾಗಿರಲಿ. ಇಂಪ್ರೆಸ್ ಮಾಡುವಂಥದ್ದು ಬೇಡ.
ನಗು ಬಂದಾಗ ಹಾಯಾಗಿ ನಗೋಣ, ಅಳು ಬಂದರೆ ಅತ್ತು ಹಗುರಾಗೋಣ. ಸಹಜವಾಗಿ ಶಿಳ್ಳೆ ಹೊಡೆಯುತ್ತಾ ಸಾಗೋಣ. ನಮ್ಮ ಬದುಕು ರೈಲು ಗಾಡಿಯಂತೆ, ಒಂದಕ್ಕೊಂದು ಹೆಣೆದುಕೊಂಡೇ ಚಲಿಸಬೇಕು. ಪ್ರತ್ಯೇಕ ಬೋಗಿ ಇರಲಿ. ಅದು ನೀವು. ಆದರೆ `ನೀವೇ ಎಲ್ಲ ಅಲ್ಲ'. ಬೋಗಿ ರೈಲಲ್ಲ.

Monday, August 2, 2010

ನಿರೂಪಣೆ , ಯಾರ ಹೊಣೆ?




ನಿರೂಪಣೆ , ಯಾರ ಹೊಣೆ?

ಇತ್ತೀಚೆಗೆ, ರೇಡಿಯೋ ಚಾನೆಲ್ ಒಂದರ ವಿರುದ್ಧ ಚಿತ್ರರಂಗದವರು ಬಂಡೆದ್ದರು. ಕಾರಣ, ಆ ಚಾನೆಲ್ ನಲ್ಲಿ ಪ್ರಸಾರವಾದ ಒಂದು ವಿಷಯ ಅವಹೇಳನಕಾರಿಯಾಗಿತ್ತು ಎಂಬುದು.
ಹೀಗೆ ಮಾಧ್ಯಮಗಳ ವಿರುದ್ಧ ಒಂದು ವ್ಯಕ್ತಿ, ಸಮುದಾಯ, ಗುಂಪುಗಳು ಆಗಾಗ ತಿರುಗಿ ಬೀಳುವುದನ್ನು ಮಾನ ನಷ್ಟ ಮೊಕದ್ದಮೆ ಹೂಡುವುದನ್ನು ನಾವು ನೋಡಿದ್ದೇವೆ.
ಈ ಚಲನ ಚಿತ್ರ ಬ್ರಾಹ್ಮಣ ವಿರೋಧಿ, ಈ ಕಥೆ ಮುಸ್ಲಿಂ ವಿರೋಧಿ, ಈ ಪುಸ್ತಕ ಸ್ತ್ರೀ ವಿರೋಧಿ... ಅನ್ನುವಂಥ ಮಾತುಗಳ ಜೊತೆ, ಸಂಬಂಧ ಪಟ್ಟವರ ವಿರುದ್ಧ ಗಲಾಟೆ, ಬಂಡಾಯ, ಆಗುವುದನ್ನೂ ನಾವು ಆಗಾಗ ನೋಡಿದ್ದೇವೆ.
ಇಂತಹುದಕ್ಕೆ ಒಬ್ಬ ಕರ್ತೃ ಇದ್ದಾನೆ. ಅವನು ಕಾರಣ ಹೇಳುತ್ತಾನೆ ಅಥವಾ ಕ್ಷಮೆ ಕೋರುತ್ತಾನೆ, ಅಥವಾ ನಡೆಯುವುದನ್ನು ಅನುಭವಿಸುತ್ತಾನೆ. ಇದು ಕಾರ್ಯ ಕಾರಣ.
ಆದರೆ, ರೇಡಿಯೋ ಚಾನೆಲ್ ಗಳಲ್ಲಿ ಎಲ್ಲಕ್ಕೂ ನಿರೂಪಕರನ್ನು ದೂರುತ್ತಾರೆ. ನಿರೂಪಣೆ ಸರಿ ಇಲ್ಲ ಎನ್ನುತ್ತಾರೆ. ಅದರಲ್ಲೂ, ಇಂದಿನ FM ಕೇಂದ್ರಗಳಲ್ಲಿ ಹಾಡಿನ ನಡುವೆ ಮಾತು ಜೋಡಿಸುವ, ಕೂಡಿಸುವ, ಜವಾಬ್ದಾರಿಯನ್ನು ಹೊತ್ತ ನಿರೂಪಕರ ಮಾತನ್ನು ಪ್ರತಿ ಕಡೆಯೂ ಅವಹೇಳನ ಮಾಡಲಾಗುತ್ತಿದೆ. ಆತನ ಜವಾಬ್ದಾರಿ ಏನು? ಆಟ ಏನು ಮಾಡಲು ಆ ಚಾನೆಲ್ ಗೆ ಬಂದಿದ್ದಾನೆ ಎಂಬ ಬಗ್ಗೆ ತಿಳುವಳಿಕೆಗಳು ಎಲ್ಲರಿಗೂ ಇಲ್ಲ. ನಿರೂಪಕರನ್ನೂ ಸೇರಿಸಿ.

ನಿರೂಪಕ ಎಂದರೆ ಒಂದು ವಿಷಯವನ್ನು ಕೊಂಡಿಯಂತೆ ಸಾಗಿಸುವವನು. ಪರಿಚಯ ಮಾಡುವವನು. ಸಂದರ್ಭ ವಿವರಿಸುವವನು. ಘಟನೆ ಹೇಳುವವನು ಎಂಬ ಅರ್ಥಗಳಿವೆ. ವಿಷಯವೇ ಇಲ್ಲದಿದ್ದರೆ ನಿರೂಪಕ ಮಾಡುವುದಾದರೂ ಏನು? ನಿರೂಪಕನಿಗೆ ವಿಷಯ ಯಾರು ಒದಗಿಸಬೇಕು ಎಂದು ಯಾರೂ ಚಿಂತಿಸುತ್ತಿಲ್ಲ. ನಿರೂಪಕ ಏನು ಮಾಡಬಾರದು ಎಂಬ ಬಗ್ಗೆ ಬಹಳ ಜನ ಬಹಳಷ್ಟು ಮಾತುಗಳನ್ನು ಆಡುತ್ತಾರೆ. ಉದಾಹರಣೆಗೆ ನೋಡಿ....
-- ನಿರೂಪಣೆ ಅನುಭವ ಅಲ್ಲ, ಯಾಕೆಂದರೆ ಅವನು field ಗೆ ಹೋಗಿಲ್ಲ. ಅವನು reporter ಅಲ್ಲ.
-- ಅವನು ರಚನೆ ಮಾಡುವಷ್ಟು ಸಾಮರ್ಥ್ಯ ಹೊಂದಿಲ್ಲ, ಅವನು ಸಾಹಿತಿ, ಲೇಖಕ ಅಲ್ಲ.
-- ಅವನು ಹಾಡು ಹೇಳಲಾರ, ಅವನು ಹಾಡುಗಾರನಲ್ಲ
-- ಅವನು ಸುದ್ದಿ ಹೇಳಲಾರ, ಅವನು ಸುದ್ದಿವಾಚಕನಲ್ಲ
-- ಅವನು ವ್ಯಕ್ತಿತ್ವದ ಬಗ್ಗೆ ಮಾತನಾಡಬಾರದು, ಅವನೇನೂ authority ಅಲ್ಲ
-- ಅವನು ಆರೋಗ್ಯ ಸಲಹೆ ಕೊಡಬಾರದು, ಅವನು ವೈದ್ಯನಲ್ಲ
-- ಅವನು ವಿಮರ್ಶೆ ಅಥವಾ comment ಮಾಡಬಾರದು, ಯಾಕೆಂದರೆ ಅದು ಅವನ ಪರಿಧಿ ಅಲ್ಲ.
-- ತನ್ನ ಬಗ್ಗೆ ತಾನು ಮಾತನಾಡಬಾರದು, ಆತ್ಮ ಪ್ರಶಂಸೆ ಸಲ್ಲದು.
ಆಯಿತು. ನಿರೂಪಕ ಇದನ್ನೆಲ್ಲಾ ಮಾಡಬಾರದು. ಹಾಗಾದರೆ ಅವನು ಏನು ಮಾಡಬೇಕು? ನಿರೂಪಕನಿಗೆ 'ವಿಷಯ' ಯಾರು ಕೊಡಬೇಕು? 'ನಿರೂಪಣಾ ಬರಹ' ಇದ್ದರೆ ಯಾರು ಪರಿಷ್ಕರಿಸಬೇಕು? ಜವಾಬ್ದಾರಿ ಯಾರು ಹೊರಬೇಕು?

ಪ್ರತಿ ಚಾನೆಲ್ ನಲ್ಲೂ ನಿರೂಪಕರನ್ನು ನಿಭಾಯಿಸುವ ಅಧಿಕಾರಿಗಳ ತಂದ ಇರುತ್ತದೆ. ನಿರೂಪಕ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸಿದರೆ ಶಹಬಾಸ್ ಗಿರಿ ಅಧಿಕಾರಿಗೆ. ಆದರೆ ಆಟ ತಪ್ಪಿದರೆ ದಂಡ ನಿರೂಪಕನಿಗೆ. ಇದು ಯಾವ ನ್ಯಾಯ?
ಈಗ SMS ಆಧಾರಿತ ವಿಷಯಾಧಾರಿತ ಕರ್ಯೇಕ್ರಮಗಳನ್ನು ಪ್ರಸ್ತುತಪಡಿಸು ಎಂದು ಸೂಚನೆ ನೀಡಲಾಗುತ್ತದೆ. ಯಾವುದೇ ಆಧಾರದಲ್ಲಿ ಮಾಡಿದರೂ ಒಂದಷ್ಟು 'ಮೂಲಭೂತ' ಮಾತು ಬೇಕೇ ಬೇಕು, ಅದನ್ನು ಹುಡುಕಲು ಪರಾಂಬರಿಸಲು ನಿರೂಪಕ ಕನಿಷ್ಠ ಎರಡು ಘಂಟೆ homework ಮಾಡಬೇಕು ಏಕೆಂದರೆ ಪ್ರತಿ ದಿನ ಕನಿಷ್ಠ ಐದು ಘಂಟೆ ಒಬ್ಬ ನಿರೂಪಕ ಮಾತನಾಡಬೇಕು (ಹಾಡುಗಳ ನಡುವೆ) ಪ್ರತಿ ಘಂಟೆಗೆ ಹತ್ತು ನಿಮಿಷ, ಅಂದರೆ ಐದು ಘಂಟೆಗೆ ಐವತ್ತು ನಿಮಿಷ. ಕಡಿಮೆಯೆಂದರೂ, ಮೂವತ್ತು ನಿಮಿಷ. ಇಷ್ಟು ಮಾಡಲು ಆತ ಪುಸ್ತಕ ಓದಬೇಕು, ಮಾಹಿತಿ ಸಂಗ್ರಹಿಸಬೇಕು, ತನ್ನ ಓಘಕ್ಕೆ ಮಾತು ಬರೆದುಕೊಳ್ಳಬೇಕು, ಹಾಡುಗಳನ್ನು ಹುಡುಕಬೇಕು ಮಾತಾಡಬೇಕು. ಇಷ್ಟಾದರೂ ಅವನು ಮಾಡಿದ್ದು 'ಏನು ಮಹಾ' ಎಂಬ ಧೋರಣೆ....

ವಿಚಾರಶೀಲರು, ಬುದ್ಧಿವಂತರು, ನಿರೂಪಣೆ ಇಂದ ಏನನ್ನೋ ಹುಡುಕುವ ಮಟ್ಟ ಮೀರಿರುತ್ತಾರೆ. ಆದಕಾರಣ, ಅವರಿಗೆ ಅದರಲ್ಲಿ ಆಸಕ್ತಿ ಇರಲಾರದು. ಇನ್ನು, ಮಧ್ಯಮ ವರ್ಗದ, ಕೆಳ-ಮಧ್ಯಮ ವರ್ಗದ, ಸಾಮಾನ್ಯರಲ್ಲಿ ಸಾಮಾನ್ಯರು ಎನಿಸುವ ಜನರು 'ನಿರೂಪಣೆ ಒಂದು ಮಜಾ' ಎಂದು ಭಾವಿಸಿ 'ಸಕ್ಕತ್ hot ಮಗಾ' ಎನ್ನುತ್ತಾರೆ.
ನಿರೂಪಣೆ ನಿಜಕ್ಕೂ 'ಮಜಾ' ಅಲ್ಲ. ಅದೊಂದು ಗಂಭೀರವಾದ, ಆನಂದಿಸಬೇಕಾದ, ಅನುಭವಿಸಬಹುದಾದ, ಕಾಯಕ. ತಾನೂ ಬೆಳೆಯುತ್ತ, ಸಮಾಜವನ್ನೂ ವಿಚಾರದೆಡೆಗೆ ಕರೆದೊಯ್ಯುವ ಭಾಷಾ ಪರಿಚಾರಕತನ.

'ನಿಮ್ಮ ಮನೆ ನಾಯಿ ಏನು ಮಾಡಿತು?' 'ನಿಮ್ಮ first night ಹೇಗಿತ್ತು' 'ನಿಮ್ಮ love ಯಾಕೆ fail ಆಯಿತು' ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ನಿರೂಪಕರು ಕಾರ್ಯಕ್ರಮ ಹೆಣೆಯಲು ಹೆಣಗಾಡುತ್ತಿದ್ದಾರೆ.
ಒಂದು ವರ್ಗ ಸಂಪೂರ್ಣವಾಗಿ ಈ ಸಂಸ್ಕೃತಿಯನ್ನು ತಿರಸ್ಕರಿಸಿದರೆ ಮತ್ತೊಂದು ವರ್ಗ 'ನಿರೂಪಕರೇ' celebrity ಗಳು ಎನ್ನುವ ಹಾಗೆ ನೋಡುತ್ತಿದೆ. ಎರಡರ ನಡುವೆ ಚಾನೆಲ್ ಗಳು ಹಣ ಮಾಡುತ್ತವೆ. executive ಗಳು ಹೆಸರು ಮಾಡುತ್ತಾರೆ. ಎಲ್ಲೋ, ಅಲ್ಲಿ-ಇಲ್ಲಿ, ಒಬ್ಬಿಬ್ಬರು ನಿರೂಪಕರನ್ನು ಬಿಟ್ಟರೆ ಇದನ್ನು serious ಆಗಿ 'ಕಲೆ' ಎಂದು ಭಾವಿಸಿ ಅದರ ಘನತೆ ಕಾಪಾಡುವಲ್ಲಿ ಬಹುತೇಕ ಜನ ನಿರೂಪಕರು ಸೋಲುತ್ತಿದ್ದಾರೆ.

ಈಗಂತೂ ಎಲ್ಲೆಡೆ star ಗಳು ನಿರೂಪಣೆ ಮಾಡಲು ಬರುತ್ತಿದ್ದರೆ. cricket stars, tennis stars, ತಾವೇ ತಮ್ಮ ಮೆಚ್ಚಿನ ಮಾತು, ಹಾಡು ಹೇಳುತ್ತಾರೆ. ಶಿವರಾಜ್ ಕುಮಾರ್ ನಿಂದ ಹಿಡಿದು ಸಿಹಿ-ಕಹಿ ಚಂದ್ರು ವರೆಗೂ ಎಲ್ಲ ನಟ-ನಟಿಯರೂ, ಗಾಯಕ-ಗಾಯಕಿಯರೂ, ಪತ್ರಕರ್ತರೂ, ಸಂಪಾದಕರೂ, doctor ಗಳು, ಬರಹಗಾರರು, ಎಲ್ಲರೂ 'show' ಮಾಡುವವರೇ. ಇದು ನನ್ನ ಶೋ, ಅದು ನಿನ್ನ ಶೋ, ನನಗೂ ಶೋ ಕೊಡ್ತಿರಾ, ಇದು ಚಾನೆಲ್ ಗಳಿಗೆ ಈಗೀಗ ಬರ್ತಾ ಇರೋ ಪ್ರಶ್ನೆ.

ಸಾಕು ಈ show off ... ನಿರೂಪಕರು ಮೊದಲು ಗಂಭಿರವಾಗಿ ಚಿಂತಿಸಬೇಕು. ನಮ್ಮ ಕೆಲಸ ಏನು? ನಾವೇನು ಮಾಡಬೇಕು? ಎಂದು. ವೃತ್ತಿಯ ಘನತೆ ಉಳಿಸಿಕೊಳ್ಳಬೇಕು.
GN ಮೋಹನ್ ಅವರು ತಮ್ಮ ಒಂದು ಪದ್ಯದಲ್ಲಿ ಹೇಳುತ್ತಾರೆ - "ಈಗ ಕಾಲ ಬದಲಾಗಿದೆ, ನಗಿಸಲು ಎಲ್ಲರೂ ಸಿದ್ಧರಿದ್ದಾರೆ. ಒಂದು ಮಾತು ಹೇಳಿದರೂ ನಗಬೇಕೆಂದ ನಿಯಮ ಇದೆ. ಮನಸು ಹೇಗಾದರೂ ಇರಲಿ ಸದಾ ಮುಗುಳ್ನಗುವ ಸುಂದರಿಯರಿದ್ದಾರೆ. ಮುಗುಳ್ನಗು ಉಕ್ಕಲೆಂದೇ toothpaste ಗಳಿವೆ...... ಕೋಡಂಗಿಗೆ ಇನ್ನು ಕೆಲಸವಿಲ್ಲ." ಹಾಗೆ ಇನ್ನು ಸ್ವಲ್ಪ ದಿನಗಳಲ್ಲಿ celebrity ಗಳೇ show ನಡೆಸುತ್ತಾರೆ. ತಜ್ಞರು-ತಜ್ಞರು ಮಾತನಾಡುತ್ತಾರೆ. ಆಗ ನಿರೂಪಕರ ಅಗತ್ಯ ಇಲ್ಲ. ಅಥವಾ ನಿರೂಪಕ ನಿಜವಾಗಿಯೂ ಕೋಡಂಗಿ ಜಾಗವನ್ನು ಸರಿಯಾಗಿ ತುಂಬುತ್ತಾನೆ...

Friday, July 2, 2010

ಹೊಸ ರಾಗವಿದೂ ........

    ಪ್ರಸಾರ ಅಂದ ಕೂಡಲೇ ನಮ್ಮ ಕಿವಿಯಲ್ಲಿ ಒಂದು ಮಧುರ ನಾದ. ಕಣ್ಣ ಮುಂದೆ ಚಿತ್ರಗಳ ಸಾಲು.. ಮನದಲ್ಲಿ ಒಂದು ಚೆಂದದ ಅನುಭೂತಿ!.. ಪ್ರಸಾರಕ್ಕೆ ಬೇರೆ ಬೇರೆ ಅರ್ಥಗಳು ಇರಬಹುದು. ಆದರೆ ಅದು ಹೆಚ್ಚಾಗಿ ಹೊಂದಿಕೊಂಡು ನಡೆದು ಬಂದಿರುವುದು ರೇಡಿಯೋ, t v   ಜೊತೆ ಜೊತೆಗೆ ಎಂದರೆ ಸರಿ ಆದೀತು. 
  ಪ್ರಸಾರ ಸಾರವತ್ತಾಗಿರಬೇಕು, ಕೆಲವರ ಸವಲತ್ತಾಗಬಾರದು ಎಂಬುದು ನಂಬಿಕೆ, ಆದರ್ಶ.ಪ್ರಸಾರ ಶ್ರೋತ್ರು ಅಥವಾ ವೀಕ್ಷಕ ಇಷ್ಟಪಡುವ ಹಾಗೆ ಇರಬೇಕು ಅನ್ನೋದು ಮತ್ತೊಂದು ತತ್ವ.. ಪ್ರಸಾರ ಅಂದರೆ ಅದು ಮನರಂಜನೆ, ಜ್ಞಾನ, ಮಾಹಿತಿ ಇವುಗಳ ಮಿಶ್ರಣ ಅನ್ನೋದು ಓಬಿರಾಯನ ಕಾಲದಿಂದ ಎಲ್ಲ ಘೋಷಣೆ ಮಾಡ್ತಾ ಇರೋ ಸಾಲು.
 ಪ್ರಸಾರ ಅಂದರೆ ಅದು ಒಂದೇ , ಆಕಾಶವಾಣಿ ದೂರದರ್ಶನ ಅನ್ನೋ ಆ  ಕಾಲದಲ್ಲಿ ಅದು ಹದವಾಗಿತ್ತು, ಹಾಡಾಗಿತ್ತು, ಹೊನಲಾಗಿತ್ತು.. ..
  ಈಗ?
    ಪ್ರಸಾರ  ಮತ್ತು ಪ್ರಚಾರ  ಒಂದೇ ಅರ್ಥ ಪಡೆದುಕೊಳ್ತಾ ಇದೆ ಅಂದ್ರೆ ಅದು ತಪ್ಪಾಗಲಾರದು. ಮಾಧ್ಯಮಗಳ ನೀತಿ ಬದಲಾಗುತ್ತಿದೆ. ಜಾಗತಿಕ ರಂಗದಲ್ಲಿ ಸ್ಪರ್ಧೆಗೆ ಮೈ ಒಡ್ಡಿ ನಿಂತಿರುವ ಈ ಬದಲಾವಣೆಯ ಪರ್ವದಲ್ಲಿ ಪ್ರಸಾರದ ಕಲ್ಪನೆಗಳು ಹೊಸ ಆಯಾಮ ಪಡೆದು ಕೊಳ್ತಾ ಇವೆ. 
   ಆಕಾಶವಾಣಿ ಅಂಗಳದಲ್ಲಿ ಬೇಂದ್ರೆ ನಗ್ತಾ ನಿಲ್ತಿದ್ರು... ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ವಿಭಾಗದ ಉಸ್ತುವಾರಿ ಹೊತ್ತಿದ್ರು.. ಅಡಿಗರ ಭೂಮಿಗೀತ ಅಕಾಶವಾಣಿ ಗಾಗಿಯೇ ಮೊದಲು ಹುಟ್ಟಿತು.. ಹೀಗೆ  ಮಾತುಗಳನ್ನು ಕೇಳ್ತಾ ಇರ್ತೀವಿ.. ದೂರದರ್ಶನದ ಒಂದು ಕನ್ನಡ ಕಾರ್ಯಕ್ರಮಕ್ಕಾಗಿ ಹೇಗೆ ಜನ ಕಾಯ್ತಾ ಕೂತುಕೊಳ್ತಿದ್ರು.. ಅಂತ ನಮಗೆಲ್ಲ ಗೊತ್ತು... 
  ಅದು ಭಾವ ಸಂಗಮ!  ಪ್ರಸಾರ ತಾಣಗಳು ಚರ್ಚೆಯ ಆವರಣ! ರಾಗ ತಾಳಗಳ ಮಿಲನ!.... 
   ಅದಕ್ಕೆ ಅದು ಎದುರಿನ  ವ್ಯಕ್ತಿಯ ಸ್ಪಂದನವೂ ಆಗಿರ್ತಿತ್ತು!!
   ಒಂದು ಅರ್ಧ ಗಂಟೆ ನಾಟಕ, ಅಥವಾ ಕಾರ್ಯಕ್ರಮ ಪ್ರಸಾರ ಕಾಣಲು ಕನಿಷ್ಠ ೬-೭ ದಿನಗಳು ಬೇಕಾಗ್ತಾ ಇತ್ತು.. rehearsal ನಲ್ಲಿ ಪಾಲ್ಗೊಂಡು ಕಾಯಬೇಕಾಗುತ್ತಿತ್ತು. ಆಕಾಶವಾಣಿ, ದೂರದರ್ಶನದ ಪ್ರಸಾರ ನಿಜ ಅರ್ಥದಲ್ಲಿ ಮನಸು ಮನಸುಗಳ ನಡುವಿನ ಪ್ರಸಾರ ಆಗಿರ್ತಾ ಇತ್ತು ಅನ್ನಬಹುದು.. 
 ಪ್ರಸಾರ ಮತ್ತು ಪ್ರಚಾರ ಒಂದೇ ಆಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಚಿತ್ರಗೀತೆಗಳು ಬಕಾಸುರನಂತೆ ಎಲ್ಲ ಕಡೆ ಬಾಯಿ, ಹೊಟ್ಟೆ ಹರಡಿ ಕುಳಿತಿವೆ... ಚಿತ್ರಗೀತೆ ಬಿಟ್ಟರೆ ಪ್ರಸಾರಕ್ಕೆ ಬೇರೆ ಸಾಮಗ್ರಿ ಇದೆ ಅನ್ನೋದು ಯಾಕೋ ಹೆಚ್ಚಿನವರ  ಗಮನಕ್ಕೆ  ಬರುತ್ತಿಲ್ಲ .FM ಖಾಸಗಿ ವಾಹಿನಿಗಳು ಪ್ರಸಾರ ಅನ್ನೋ ಪದದ ಕಲ್ಪನೆಯನ್ನೇ ಬದಲಾಯಿಸಿವೆ.
   ಕಿರುತೆರೆ ಸ್ವಲ್ಪ ವಾಸಿ. ವಿವಿಧ ವಿಷಯಗಳಿಗೆ ವಿವಿಧ ಸಮಗ್ರ channel    ಗಳೇ ಇವೆ. ಆದರೆ ಬಾನುಲಿರಂಗದಲ್ಲಿ ಇಷ್ಟು ವಿಸ್ತಾರ ಕಾಣುತ್ತಿಲ್ಲ. ದೊಡ್ಡ ನಗರಗಳಲ್ಲಿ 8-10 ಚಾನೆಲ್ ಗಳು ಇದ್ದರೂ    ಎಲ್ಲವೂ ಪೂರ್ಣ ಹಿಂದಿ, ಹಾಗು ಸ್ಥಳೀಯ ಚಿತ್ರಗೀತೆಗಳಿಗೆ ಮೀಸಲಾಗಿವೆ.ಒಂದು  ಶೋ,ಒಬ್ಬ guest ,ಒಂದಷ್ಟು ಮಾತು, ಒಂದಷ್ಟು ಹರಟೆ, ಬಿಟ್ಟರೆ ಬೇರೆ ಬಗೆಯ ಧ್ವನಿಮುದ್ರಿತ ಆಯೋಜಿತ, ಕಾರ್ಯಕ್ರಮಗಳು ಕಣ್ಮರೆ ಕಿವಿಮರೆ ಆಗ್ತಾ ಇವೆ.
 ನೇರ ಪ್ರಸಾರಗಳ ಮಜಾ ಈಗ ಸಜಾ ಆಗುತ್ತಿದೆ.. ತಯಾರಿ ಇಲ್ಲದೆ ಟೈಮ್ ರೈಲು ಓಡಿಸುತ್ತಿದ್ದಾರೆ ಎಲ್ಲ ತಳ್ಳು ಮಾಡೆಲ್ ಗಾಡಿಗಳೇ!! 
  ಈಗ ಕಲಾವಿದರಿಗೆ ಬಿಡುವಿಲ್ಲ. ಪ್ರಚಾರ ಮುಖ್ಯ.  
   ನಗರದಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮಗಳ ಪ್ರಚಾರ, ಬಿಡುಗಡೆ ಆಗಲಿರುವ ಚಿತ್ರಗಳ ಪ್ರಚಾರ ಅಭಿವೃದ್ಧಿ ಆಗಿದೆ ಅಂತ prove A ಮಾಡಲು ಸರ್ಕಾರ ನಡೆಸೋ ಪ್ರಚಾರ , ಚಾನೆಲ್ ಪ್ರಚಾರಕ್ಕೆ ನಡೆಸೋ ವೈಯುಕ್ತಿಕ ಪ್ರಚಾರ ..... .. top1  ಅಂತ ಹೇಳಿಕೊಳ್ಳಲು ಪ್ರಚಾರ...   ಹೌದು. ಆಗಿನ ಪ್ರಸಾರದಲ್ಲಿ ' ಸಾರ' ಇತ್ತು.. ಈಗಿನ ಪ್ರಚಾರದಲ್ಲಿ 'ಚಾರ' ಅಂದರೆ ಲೆಕ್ಕಾಚಾರ ಇದೆ..
   channel  ಗೆ ಹಣ ನೀಡಿ, ಸಮಯ ಕೊಂಡುಕೊಳ್ಳಿ, ನಿಮಗೆ ಬೇಕಾದ ಆಚಾರ ಆರಿಸಿಕೊಳ್ಳಿ.
   ದೊಡ್ಡ ದೊಡ್ಡ ಹೆಸರಾಂತ ಕಲಾವಿದರೂ ಕೂಡ ಪ್ರಚಾರಕ್ಕೆ ಸಂದರ್ಶನ ಕೊಡ್ತಾರೆ ಹೊರತು ಸಾರ ಅಂದಾಗ.. ಸಾರೀ  ಅಂತಾ ಇದ್ದಾರೆ.
     ಪತ್ರಿಕಾ ಸಂಪಾದಕರು, ಪತ್ರಕರ್ತರು, ಹಾಡುಗಾರರು, electronic ಮಾಧ್ಯಮದ  ಪ್ರಸಾರದ ರೂಪುರೇಷೆಗಳ ಮೂಲ ಕಲ್ಪನೆಯೂ ಇಲ್ಲದವರು, ಇಂದು, ಪ್ರಚಾರದ ಸಾಮಗ್ರಿಗಳಾಗುತ್ತಿದ್ದಾರೆ. 
  ಪ್ರಚಾರ  ಯಾವುದು, ಪ್ರಸಾರ ಯಾವುದು ಅಂತ ನಿರ್ಧರಿಸೋ ಸಮಯ ವ್ಯವಧಾನ ಮಾಧ್ಯಮಗಳಿಗೆ ಇಲ್ಲ. ಅರಿವು ಹುಟ್ಟಬೇಕಾದ ಮುಖ್ಯ ಸ್ಥಳಗಳೆ ಮೌನ ತಾಳಿವೆ. ಅಂತರಗಂಗೆ ಬತ್ತುತ್ತಿದೆ.  
  ನಾವೆಲ್ಲಾ ಪ್ರಹಾರಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು ಇಂದಿನ ಅನಿವಾರ್ಯ.. 
  ಇದು ಬದಲಾವಣೆಯೇ? ಹೊಸ ಸವಾಲೇ?