Wednesday, September 15, 2010

ಮಾರೋದು ಹೀಗಾ?

ಮಾರೋದು ಹೀಗಾ?

ಇತ್ತೀಚೆಗೆ ನಮಗೆ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿವೆ. ಪ್ರಶ್ನೆಗಳೇ ಇಲ್ಲದಿದ್ದರೂ ನಿಮ್ಮ ಮನದೊಳಗೆ ಬಂದು `ವಿಶೇಷ', `ವಿಭಿನ್ನ' ಪ್ರಶ್ನೆಯ ಹುಳು ಬಿಟ್ಟು, ಅದಕ್ಕೆ ಉತ್ತರ ಕೊಟ್ಟು ಅವರೇ ಕೃತಾರ್ಥರಾಗುತ್ತಾರೆ.

ನಡೆಯುವುದು ಹೀಗೆ, ಮಾತನಾಡುವುದು ಹೀಗೆ, ಓಢಾಡುವುದು ಹೀಗೆ, ನಗುವುದು ಹೀಗೆ, ನಿಲ್ಲುವುದು ಹೀಗೆ, ಎಡಕ್ಕೆ ತಿರುಗಿ ಒರೆನೋಟ ಬೀರಿದರೆ ಏನಾಗುತ್ತದೆ, ಬಲಕ್ಕೆ ತಿರುಗಿ ಕಣ್ಣು ಹೊಡೆದರೆ ಹೇಗಿರುತ್ತದೆ, ಯಾವುದು ಪರಿಣಾಮಕಾರಿ ಎಂದೆಲ್ಲಾ ತಿಳಿಸಲು ಅನೇಕ ಪುಸ್ತಕಗಳು, ಪ್ರಶ್ನೋತ್ತರ ಮಾಲಿಕೆಗಳು, ಸಿದ್ಧ ಪಾಠಗಳು ಸಿಗುತ್ತಿವೆ. ಜೊತೆಗೆ ಓದುವುದು ಹೇಗೆ, ಬರೆಯುವುದು ಹೇಗೆ, ದುಡ್ಡು ಮಾಡುವುದು ಹೇಗೆ ಇಂತಹ series ತುಂಬಾ ಮಹತ್ವ ಬಂದಿದೆ. ಮೊನ್ನೆ ಪ್ರಕಾಶಕರೊಬ್ಬರು ಹೇಳುತ್ತಿದ್ದರು. ಇಪ್ಪತ್ತೈದು ಮೂವತ್ತು ರೂಪಾಯಿಗಳಿಗೆ ಪ್ರಕಟವಾಗುವ ಪುಟ್ಟ ಪುಟ್ಟ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಈಗ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಆರೋಗ್ಯ ಪುಸ್ತಕಗಳು ಮತ್ತು `ಹೇಗೆ' series ಪುಸ್ತಕಗಳು ಎಂದು.

ಐದಾರು ವರ್ಷಗಳಿಂದ ಇಂಥ ಲೇಖನಗಳು ಪ್ರತಿ ಪತ್ರಿಕೆಯಲ್ಲೂ ಬರುತ್ತಿವೆ. ಪತ್ರಿಕೆಯಲ್ಲಿ ಪ್ರಕಟವಾದ ಸಂಗ್ರಹವಾದ ಸಂಗ್ರಹ ರೂಪಗಳು ಪುಸ್ತಕ ಮೂಲಕ ಲಭ್ಯ. ಇಂಥ ಪುಸ್ತಕಗಳು, ಲೇಖನಗಳು ಬಹುಶಃ ಯಾವುದೇ ವಿಚಾರದಲ್ಲಿ ಪ್ರಾಥಮಿಕ ತಿಳಿವಳಿಕೆ ಕೊಡುತ್ತವೆ, ಕುತೂಹಲ ಹುಟ್ಟಿಸುತ್ತವೆ, ಆಸಕ್ತಿ ಮೂಡಿಸಿ ಮುಂದಿನ ದಾರಿ ಸುಗಮ ಮಾಡುತ್ತವೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಇವು ಬರುತ್ತಿರುವ ಭರಾಟೆ, ಅಬ್ಬರ, ಗುಣಮಟ್ಟ, ಇವೆಲ್ಲ ಅಸಹ್ಯ ಹುಟ್ಟಿಸುವ ಹಾಗಿದೆ. ಇಂತಹ ಲೇಖನಗಳನ್ನು ಬರೆಯುವವರು ಯಾರು? ಅವರ ಅರ್ಹತೆ, ಜ್ಞಾನ ಒಂದೂ ಮಾನ್ಯವಲ್ಲವೇನೋ ಎಂಬ ಸಂಶಯವೂ ಕೆಲವು ಸಲ ಕಾಡುತ್ತದೆ. ಮೊನ್ನೆ ಗುತ್ತಿಗೆದಾರರೊಬ್ಬರು ಹೇಳುತ್ತಿದ್ದರು - `ಕಾಂಟ್ರಾಕ್ಟ್ ಬೇರೆ, ಮೇಸ್ತ್ರೀ ಬೇರೆ, ಕಾಂಟ್ರಾಕ್ಟರ್ಗೆ ಕರಣಿ ಹಿಡಿಯಲು ಬರಬೇಕಿಲ್ಲ.'
ಇವೆಲ್ಲಾ ಹಣ ಮಾಡುವ ಉದ್ಯೋಗಗಳು ಅಷ್ಟೆ. ಯಾವ ಊರಿನಲ್ಲಿ ಎಷ್ಟು ಕ್ಯಾಂಪ್ ನಡೆಸಬಹುದು, ಯಾವ ವಿಷಯಕ್ಕೆ ಅಸಕ್ತಿಯುಳ್ಳ ಜನರಿದ್ದಾರೆ ಎಂಬಂಥ ಅಂಶಗಳನ್ನು ಕಲೆ ಹಾಕಿ, ಸೂಕ್ತ ಪ್ರಚಾರ ಕೊಟ್ಟು, ಒಂದಷ್ಟು ವಿಷಯ ತಿಳಿಸಿದರೆ ಸಾಕು ಹೊಟ್ಟೆಪಾಡು ನಡೆಯುತ್ತದೆ. `ನಾನೇನು ನನ್ನ ಯೋಗ್ಯತೆ ಏನು, ಓದಿದಂತೆ, ಅಥವಾ ನುಡಿದಂತೆ ನಡೆಯುತ್ತೇನಾ' ಎಂಬೆಲ್ಲ ವಿಚಾರಗಳು ಯಾರಿಗೆ ಬೇಕು? ಅಸಲು ಯಾರಾದರೂ ಒಳ್ಳೆಯದನ್ನು ಹೇಳಿದಾಗ `ವಿಷಯವನ್ನು' ಗ್ರಹಿಸಬೇಕೇ ಹೊರತು `ವ್ಯಕ್ತಿಯನ್ನೇಕೆ ನೋಡಬೇಕು ಎಂಬ ವಾದವೂ ಇದೆ. ಹಾಗಾಗಿಯೇ ಇಂದು ವ್ಯಕ್ತಿಗಳು ಸಿಗುವುದಿಲ್ಲ, ವಿಷಯಗಳು ಸಿಗುತ್ತವೆ.

ಹೊಟ್ಟೆಪಾಡು ಮತ್ತು ಮಾರ್ಕೆಟಿಂಗ್ ಮಧ್ಯೆ ನಾವು ಕಳೆದು ಹೋಗುತ್ತಿಲ್ಲವೇ? ಹೃದಯದ ಪಾಡೇನು? ಮನಸ್ಸಿನ ಪಾಡೇನು? ಮನಸ್ಸು, ಹೃದಯ ಇಲ್ಲದ ಸಮಾಜದ ಪಾಡೇನು? ಮನಸ್ಸಿನ ಮಾತುಗಳನ್ನು ಪೂರ್ತಿಯಾಗಿ ಆಡಬೇಡಿ. ತಡೆಯಿರಿ. ಎದುರುಗಡೆ ಯಾರಿದ್ದಾರೆಂದು ನೋಡಿ ಅವರಿಗೆ ತಕ್ಕ ಹಾಗೆ ವರ್ತಿಸಿ . ಕಣ್ಣುಗಳನ್ನು ಹೀಗೇ ಮಿಟುಕಿಸಿ. ಕೈಕಾಲುಗಳನ್ನು ಹೀಗೇ ಆಡಿಸಿ. ಇಂತಹುದನ್ನು ಓದುತ್ತಾ ಓದುತ್ತಾಬೆಳೆಸಿಕೊಂಡ ನಮ್ಮ ವರ್ತನೆಗಳು ನಿಜಕ್ಕೂ ಅಂತರಂಗವನ್ನು ಅರಳಿಸುತ್ತವೆಯೇ?
ನಾವು ಮುದ್ದಾಗಿ ಕಾಣುವ , ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು ಬರುವ ಒಂದು ವರ್ಗವನ್ನು ಸೃಷ್ಟಿ ಮಾಡುತ್ತಿಲ್ಲವೇ? ಅಕಸ್ಮಾತ್ ದಾರಿಯಲ್ಲಿ ಬಿದ್ದುಬಿಟ್ಟರೆ ತಾವಾಗಿಯೇ ಏಳುವುದು ಹೇಗೆಂದು ಇವರಿಗೆ ತೊಚುವುದಿಲ್ಲ. ಏಕೆಂದರೆ `ಬಿದ್ದಾಗ ಏಳುವುದು ಹೇಗೆ?' ಎಂಬ ಪುಸ್ತಕ ಪ್ರಕಟವಾಗದೇ ಇರುವುದರಿಂದ ಇವರು ಅದನ್ನು ಓದಿರುವುದಿಲ್ಲ. ಹಾಗೇ ಯಾರಾದರೂ ಬಿದ್ದಾಗ, ಅವರ ಬಳಿ ಹೋಗಿ ಕಾಪಾಡ ಬೇಕೆನ್ನುವುದೂ ಇವರಿಗೆ ತಿಳಿಯಲಾರದು. ಅದು ಅವರ ತಪ್ಪಲ್ಲ.
ಮೊನ್ನೆ ಹದಿನೆಂಟರ ಯುವತಿಯೊಬ್ಬಳು , ತಾನು ಮಾಡಿದ ತಪ್ಪಿಗೆ ನಗನಗುತ್ತಾ ಸಾರಿ ಕೇಳಿದಳು. ತಪ್ಪು ಮಾಡಿದಾಗ ಸಾರಿ ಕೇಳಿ ಎಂಬುದು ವ್ಯಕ್ತಿತ್ವ ವಿಕಸನದ ಪಾಠ. ಹಾಗಾಗಿ ಆ ಸಾರಿಯಲ್ಲಿ ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ. ಮರುದಿನ ಪುನಃ ಅದೇ ತಪ್ಪು! ಅದೇ ಸಾರೀ! ಅದೇ ನಗು! ಬೇಕೆಂದೇ ಕೈಕಾಲುಗಳನ್ನು ಆಡಿಸುತ್ತ, ಕಣ್ಣು ಮಿಟುಕಿಸುತ್ತಾ, ಬಲವಂತವಾಗಿ ನಗುವ, ಎಲ್ಲರನ್ನೂ ಇಂಪ್ರೆಸ್ ಮಡಲು ಹೊರಡುವ ಈ `ವಿಕಾಸದ ಕೂಸು'ಗಳನ್ನು ನೋಡಿಧಾಗ ಮರುಕವೆನಿಸುತ್ತದೆ.
ಗಮನಿಸಿ ನೋಡಿ , ಎಲ್ಲ ವ್ಯಕ್ತಿತ್ವ ವಿಕಸನ ಪುಸ್ತಕ ಪಾಠ, ಪ್ರವಚನಾದಿಗಳು ಹೇಳುವುದು `ನಾನು' ಬಗ್ಗೆ. ನನ್ನ ಸಂತೋಷ, ನನ್ನ ವ್ಯಕ್ತಿತ್ವ, ನನ್ನ ಉನ್ನತಿ ಮತ್ತು ನಾನೇ ನಂಬರ್ ಒನ್ ಆಗಬೇಕೆಂಬ ಮೂಲಮಂತ್ರ. ನಾವು ಸಮಷ್ಟಿಯಲ್ಲಿ ಬಂದವರು, ಇತರರಿಂದ ನಾವು, ಸಮಾಜದಿಂದ ನಾವು, ನಾವು ಇಂಪ್ರೆಸ್ ಮಾಡಬೇಕಾಗಿರುವುದು ನಮ್ಮ ಜ್ಞಾನದಿಂದ ಮಾಡುವ ಕೆಲಸಗಳಿಂದ ಹಾವ-ಭಾವಗಳಿಂದ ಅಲ್ಲ ಎಂಬುದನ್ನು ವಿಕಾಸದ ಪಾಠ ಓದಿದವರಿಗೆ ಹೇಳಲು ಆಗುವುದೇ ಇಲ್ಲ.
ಸಾಲು ಮರದ ತಿಮ್ಮಕ್ಕನಿಗೆ ಗೊತ್ತಿಲ್ಲ. ಆಕೆಗೆ ತಾನು ನಂ.1 ಆಗಬೇಕು ಎಂಬ ಗುರಿಯೂ ಇರಲಿಲ್ಲ. ತನ್ನ ಸಹಜ ಅಂತರಂಗದ ತುಡಿತಕ್ಕೆ ಕೆಲಸ ಮಾಡಿದಳು. ನಮಗೆ ನಂ.1 ಜೊತೆ ಸ್ಪರ್ಧೆ ಬೇಕೋ ನಮ್ಮ ಸಹಜದ ಆನಂದ ಬೇಕೋ ಎಂಬ ನಿರ್ಧಾರ ನಮ್ಮದೆ ಅಲ್ಲವೇ? ಆಡಂಬರ, ಅಸಹಜತೆ, ಅಬ್ಬರ ಬೇಕೆ? ಮನಸ್ಸಿನ ಜ್ಞಾನ ಅನುಭವಗಳಿಂದ ಬಂದ ತಿಳುವಳಿಕೆಗಳು ವ್ಯಕ್ತಿಯನ್ನು ವಿಕಾಸದೆಡೆಗೆ ಕರೆದೊಯ್ಯುತ್ತವೆ. ಅಂತರಾತ್ಮ ಶುದ್ಧ ಆನಂದದಿಂದ ಅರಳಿದರೆ, ಕಣ್ಣುಗಳಲ್ಲಿ ಆ ಪ್ರಭೆ ತಾನಾಗಿಯೇ ಗೋಚರಿಸುತ್ತದೆ. ಹಾಗಾಗಿ ಗುರಿ ಜ್ಞಾನದೆಡೆಗೆ ಇರಲಿ, ಉತ್ತಮವಾದುದಾಗಿರಲಿ. ಇಂಪ್ರೆಸ್ ಮಾಡುವಂಥದ್ದು ಬೇಡ.
ನಗು ಬಂದಾಗ ಹಾಯಾಗಿ ನಗೋಣ, ಅಳು ಬಂದರೆ ಅತ್ತು ಹಗುರಾಗೋಣ. ಸಹಜವಾಗಿ ಶಿಳ್ಳೆ ಹೊಡೆಯುತ್ತಾ ಸಾಗೋಣ. ನಮ್ಮ ಬದುಕು ರೈಲು ಗಾಡಿಯಂತೆ, ಒಂದಕ್ಕೊಂದು ಹೆಣೆದುಕೊಂಡೇ ಚಲಿಸಬೇಕು. ಪ್ರತ್ಯೇಕ ಬೋಗಿ ಇರಲಿ. ಅದು ನೀವು. ಆದರೆ `ನೀವೇ ಎಲ್ಲ ಅಲ್ಲ'. ಬೋಗಿ ರೈಲಲ್ಲ.

Monday, August 2, 2010

ನಿರೂಪಣೆ , ಯಾರ ಹೊಣೆ?




ನಿರೂಪಣೆ , ಯಾರ ಹೊಣೆ?

ಇತ್ತೀಚೆಗೆ, ರೇಡಿಯೋ ಚಾನೆಲ್ ಒಂದರ ವಿರುದ್ಧ ಚಿತ್ರರಂಗದವರು ಬಂಡೆದ್ದರು. ಕಾರಣ, ಆ ಚಾನೆಲ್ ನಲ್ಲಿ ಪ್ರಸಾರವಾದ ಒಂದು ವಿಷಯ ಅವಹೇಳನಕಾರಿಯಾಗಿತ್ತು ಎಂಬುದು.
ಹೀಗೆ ಮಾಧ್ಯಮಗಳ ವಿರುದ್ಧ ಒಂದು ವ್ಯಕ್ತಿ, ಸಮುದಾಯ, ಗುಂಪುಗಳು ಆಗಾಗ ತಿರುಗಿ ಬೀಳುವುದನ್ನು ಮಾನ ನಷ್ಟ ಮೊಕದ್ದಮೆ ಹೂಡುವುದನ್ನು ನಾವು ನೋಡಿದ್ದೇವೆ.
ಈ ಚಲನ ಚಿತ್ರ ಬ್ರಾಹ್ಮಣ ವಿರೋಧಿ, ಈ ಕಥೆ ಮುಸ್ಲಿಂ ವಿರೋಧಿ, ಈ ಪುಸ್ತಕ ಸ್ತ್ರೀ ವಿರೋಧಿ... ಅನ್ನುವಂಥ ಮಾತುಗಳ ಜೊತೆ, ಸಂಬಂಧ ಪಟ್ಟವರ ವಿರುದ್ಧ ಗಲಾಟೆ, ಬಂಡಾಯ, ಆಗುವುದನ್ನೂ ನಾವು ಆಗಾಗ ನೋಡಿದ್ದೇವೆ.
ಇಂತಹುದಕ್ಕೆ ಒಬ್ಬ ಕರ್ತೃ ಇದ್ದಾನೆ. ಅವನು ಕಾರಣ ಹೇಳುತ್ತಾನೆ ಅಥವಾ ಕ್ಷಮೆ ಕೋರುತ್ತಾನೆ, ಅಥವಾ ನಡೆಯುವುದನ್ನು ಅನುಭವಿಸುತ್ತಾನೆ. ಇದು ಕಾರ್ಯ ಕಾರಣ.
ಆದರೆ, ರೇಡಿಯೋ ಚಾನೆಲ್ ಗಳಲ್ಲಿ ಎಲ್ಲಕ್ಕೂ ನಿರೂಪಕರನ್ನು ದೂರುತ್ತಾರೆ. ನಿರೂಪಣೆ ಸರಿ ಇಲ್ಲ ಎನ್ನುತ್ತಾರೆ. ಅದರಲ್ಲೂ, ಇಂದಿನ FM ಕೇಂದ್ರಗಳಲ್ಲಿ ಹಾಡಿನ ನಡುವೆ ಮಾತು ಜೋಡಿಸುವ, ಕೂಡಿಸುವ, ಜವಾಬ್ದಾರಿಯನ್ನು ಹೊತ್ತ ನಿರೂಪಕರ ಮಾತನ್ನು ಪ್ರತಿ ಕಡೆಯೂ ಅವಹೇಳನ ಮಾಡಲಾಗುತ್ತಿದೆ. ಆತನ ಜವಾಬ್ದಾರಿ ಏನು? ಆಟ ಏನು ಮಾಡಲು ಆ ಚಾನೆಲ್ ಗೆ ಬಂದಿದ್ದಾನೆ ಎಂಬ ಬಗ್ಗೆ ತಿಳುವಳಿಕೆಗಳು ಎಲ್ಲರಿಗೂ ಇಲ್ಲ. ನಿರೂಪಕರನ್ನೂ ಸೇರಿಸಿ.

ನಿರೂಪಕ ಎಂದರೆ ಒಂದು ವಿಷಯವನ್ನು ಕೊಂಡಿಯಂತೆ ಸಾಗಿಸುವವನು. ಪರಿಚಯ ಮಾಡುವವನು. ಸಂದರ್ಭ ವಿವರಿಸುವವನು. ಘಟನೆ ಹೇಳುವವನು ಎಂಬ ಅರ್ಥಗಳಿವೆ. ವಿಷಯವೇ ಇಲ್ಲದಿದ್ದರೆ ನಿರೂಪಕ ಮಾಡುವುದಾದರೂ ಏನು? ನಿರೂಪಕನಿಗೆ ವಿಷಯ ಯಾರು ಒದಗಿಸಬೇಕು ಎಂದು ಯಾರೂ ಚಿಂತಿಸುತ್ತಿಲ್ಲ. ನಿರೂಪಕ ಏನು ಮಾಡಬಾರದು ಎಂಬ ಬಗ್ಗೆ ಬಹಳ ಜನ ಬಹಳಷ್ಟು ಮಾತುಗಳನ್ನು ಆಡುತ್ತಾರೆ. ಉದಾಹರಣೆಗೆ ನೋಡಿ....
-- ನಿರೂಪಣೆ ಅನುಭವ ಅಲ್ಲ, ಯಾಕೆಂದರೆ ಅವನು field ಗೆ ಹೋಗಿಲ್ಲ. ಅವನು reporter ಅಲ್ಲ.
-- ಅವನು ರಚನೆ ಮಾಡುವಷ್ಟು ಸಾಮರ್ಥ್ಯ ಹೊಂದಿಲ್ಲ, ಅವನು ಸಾಹಿತಿ, ಲೇಖಕ ಅಲ್ಲ.
-- ಅವನು ಹಾಡು ಹೇಳಲಾರ, ಅವನು ಹಾಡುಗಾರನಲ್ಲ
-- ಅವನು ಸುದ್ದಿ ಹೇಳಲಾರ, ಅವನು ಸುದ್ದಿವಾಚಕನಲ್ಲ
-- ಅವನು ವ್ಯಕ್ತಿತ್ವದ ಬಗ್ಗೆ ಮಾತನಾಡಬಾರದು, ಅವನೇನೂ authority ಅಲ್ಲ
-- ಅವನು ಆರೋಗ್ಯ ಸಲಹೆ ಕೊಡಬಾರದು, ಅವನು ವೈದ್ಯನಲ್ಲ
-- ಅವನು ವಿಮರ್ಶೆ ಅಥವಾ comment ಮಾಡಬಾರದು, ಯಾಕೆಂದರೆ ಅದು ಅವನ ಪರಿಧಿ ಅಲ್ಲ.
-- ತನ್ನ ಬಗ್ಗೆ ತಾನು ಮಾತನಾಡಬಾರದು, ಆತ್ಮ ಪ್ರಶಂಸೆ ಸಲ್ಲದು.
ಆಯಿತು. ನಿರೂಪಕ ಇದನ್ನೆಲ್ಲಾ ಮಾಡಬಾರದು. ಹಾಗಾದರೆ ಅವನು ಏನು ಮಾಡಬೇಕು? ನಿರೂಪಕನಿಗೆ 'ವಿಷಯ' ಯಾರು ಕೊಡಬೇಕು? 'ನಿರೂಪಣಾ ಬರಹ' ಇದ್ದರೆ ಯಾರು ಪರಿಷ್ಕರಿಸಬೇಕು? ಜವಾಬ್ದಾರಿ ಯಾರು ಹೊರಬೇಕು?

ಪ್ರತಿ ಚಾನೆಲ್ ನಲ್ಲೂ ನಿರೂಪಕರನ್ನು ನಿಭಾಯಿಸುವ ಅಧಿಕಾರಿಗಳ ತಂದ ಇರುತ್ತದೆ. ನಿರೂಪಕ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸಿದರೆ ಶಹಬಾಸ್ ಗಿರಿ ಅಧಿಕಾರಿಗೆ. ಆದರೆ ಆಟ ತಪ್ಪಿದರೆ ದಂಡ ನಿರೂಪಕನಿಗೆ. ಇದು ಯಾವ ನ್ಯಾಯ?
ಈಗ SMS ಆಧಾರಿತ ವಿಷಯಾಧಾರಿತ ಕರ್ಯೇಕ್ರಮಗಳನ್ನು ಪ್ರಸ್ತುತಪಡಿಸು ಎಂದು ಸೂಚನೆ ನೀಡಲಾಗುತ್ತದೆ. ಯಾವುದೇ ಆಧಾರದಲ್ಲಿ ಮಾಡಿದರೂ ಒಂದಷ್ಟು 'ಮೂಲಭೂತ' ಮಾತು ಬೇಕೇ ಬೇಕು, ಅದನ್ನು ಹುಡುಕಲು ಪರಾಂಬರಿಸಲು ನಿರೂಪಕ ಕನಿಷ್ಠ ಎರಡು ಘಂಟೆ homework ಮಾಡಬೇಕು ಏಕೆಂದರೆ ಪ್ರತಿ ದಿನ ಕನಿಷ್ಠ ಐದು ಘಂಟೆ ಒಬ್ಬ ನಿರೂಪಕ ಮಾತನಾಡಬೇಕು (ಹಾಡುಗಳ ನಡುವೆ) ಪ್ರತಿ ಘಂಟೆಗೆ ಹತ್ತು ನಿಮಿಷ, ಅಂದರೆ ಐದು ಘಂಟೆಗೆ ಐವತ್ತು ನಿಮಿಷ. ಕಡಿಮೆಯೆಂದರೂ, ಮೂವತ್ತು ನಿಮಿಷ. ಇಷ್ಟು ಮಾಡಲು ಆತ ಪುಸ್ತಕ ಓದಬೇಕು, ಮಾಹಿತಿ ಸಂಗ್ರಹಿಸಬೇಕು, ತನ್ನ ಓಘಕ್ಕೆ ಮಾತು ಬರೆದುಕೊಳ್ಳಬೇಕು, ಹಾಡುಗಳನ್ನು ಹುಡುಕಬೇಕು ಮಾತಾಡಬೇಕು. ಇಷ್ಟಾದರೂ ಅವನು ಮಾಡಿದ್ದು 'ಏನು ಮಹಾ' ಎಂಬ ಧೋರಣೆ....

ವಿಚಾರಶೀಲರು, ಬುದ್ಧಿವಂತರು, ನಿರೂಪಣೆ ಇಂದ ಏನನ್ನೋ ಹುಡುಕುವ ಮಟ್ಟ ಮೀರಿರುತ್ತಾರೆ. ಆದಕಾರಣ, ಅವರಿಗೆ ಅದರಲ್ಲಿ ಆಸಕ್ತಿ ಇರಲಾರದು. ಇನ್ನು, ಮಧ್ಯಮ ವರ್ಗದ, ಕೆಳ-ಮಧ್ಯಮ ವರ್ಗದ, ಸಾಮಾನ್ಯರಲ್ಲಿ ಸಾಮಾನ್ಯರು ಎನಿಸುವ ಜನರು 'ನಿರೂಪಣೆ ಒಂದು ಮಜಾ' ಎಂದು ಭಾವಿಸಿ 'ಸಕ್ಕತ್ hot ಮಗಾ' ಎನ್ನುತ್ತಾರೆ.
ನಿರೂಪಣೆ ನಿಜಕ್ಕೂ 'ಮಜಾ' ಅಲ್ಲ. ಅದೊಂದು ಗಂಭೀರವಾದ, ಆನಂದಿಸಬೇಕಾದ, ಅನುಭವಿಸಬಹುದಾದ, ಕಾಯಕ. ತಾನೂ ಬೆಳೆಯುತ್ತ, ಸಮಾಜವನ್ನೂ ವಿಚಾರದೆಡೆಗೆ ಕರೆದೊಯ್ಯುವ ಭಾಷಾ ಪರಿಚಾರಕತನ.

'ನಿಮ್ಮ ಮನೆ ನಾಯಿ ಏನು ಮಾಡಿತು?' 'ನಿಮ್ಮ first night ಹೇಗಿತ್ತು' 'ನಿಮ್ಮ love ಯಾಕೆ fail ಆಯಿತು' ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ನಿರೂಪಕರು ಕಾರ್ಯಕ್ರಮ ಹೆಣೆಯಲು ಹೆಣಗಾಡುತ್ತಿದ್ದಾರೆ.
ಒಂದು ವರ್ಗ ಸಂಪೂರ್ಣವಾಗಿ ಈ ಸಂಸ್ಕೃತಿಯನ್ನು ತಿರಸ್ಕರಿಸಿದರೆ ಮತ್ತೊಂದು ವರ್ಗ 'ನಿರೂಪಕರೇ' celebrity ಗಳು ಎನ್ನುವ ಹಾಗೆ ನೋಡುತ್ತಿದೆ. ಎರಡರ ನಡುವೆ ಚಾನೆಲ್ ಗಳು ಹಣ ಮಾಡುತ್ತವೆ. executive ಗಳು ಹೆಸರು ಮಾಡುತ್ತಾರೆ. ಎಲ್ಲೋ, ಅಲ್ಲಿ-ಇಲ್ಲಿ, ಒಬ್ಬಿಬ್ಬರು ನಿರೂಪಕರನ್ನು ಬಿಟ್ಟರೆ ಇದನ್ನು serious ಆಗಿ 'ಕಲೆ' ಎಂದು ಭಾವಿಸಿ ಅದರ ಘನತೆ ಕಾಪಾಡುವಲ್ಲಿ ಬಹುತೇಕ ಜನ ನಿರೂಪಕರು ಸೋಲುತ್ತಿದ್ದಾರೆ.

ಈಗಂತೂ ಎಲ್ಲೆಡೆ star ಗಳು ನಿರೂಪಣೆ ಮಾಡಲು ಬರುತ್ತಿದ್ದರೆ. cricket stars, tennis stars, ತಾವೇ ತಮ್ಮ ಮೆಚ್ಚಿನ ಮಾತು, ಹಾಡು ಹೇಳುತ್ತಾರೆ. ಶಿವರಾಜ್ ಕುಮಾರ್ ನಿಂದ ಹಿಡಿದು ಸಿಹಿ-ಕಹಿ ಚಂದ್ರು ವರೆಗೂ ಎಲ್ಲ ನಟ-ನಟಿಯರೂ, ಗಾಯಕ-ಗಾಯಕಿಯರೂ, ಪತ್ರಕರ್ತರೂ, ಸಂಪಾದಕರೂ, doctor ಗಳು, ಬರಹಗಾರರು, ಎಲ್ಲರೂ 'show' ಮಾಡುವವರೇ. ಇದು ನನ್ನ ಶೋ, ಅದು ನಿನ್ನ ಶೋ, ನನಗೂ ಶೋ ಕೊಡ್ತಿರಾ, ಇದು ಚಾನೆಲ್ ಗಳಿಗೆ ಈಗೀಗ ಬರ್ತಾ ಇರೋ ಪ್ರಶ್ನೆ.

ಸಾಕು ಈ show off ... ನಿರೂಪಕರು ಮೊದಲು ಗಂಭಿರವಾಗಿ ಚಿಂತಿಸಬೇಕು. ನಮ್ಮ ಕೆಲಸ ಏನು? ನಾವೇನು ಮಾಡಬೇಕು? ಎಂದು. ವೃತ್ತಿಯ ಘನತೆ ಉಳಿಸಿಕೊಳ್ಳಬೇಕು.
GN ಮೋಹನ್ ಅವರು ತಮ್ಮ ಒಂದು ಪದ್ಯದಲ್ಲಿ ಹೇಳುತ್ತಾರೆ - "ಈಗ ಕಾಲ ಬದಲಾಗಿದೆ, ನಗಿಸಲು ಎಲ್ಲರೂ ಸಿದ್ಧರಿದ್ದಾರೆ. ಒಂದು ಮಾತು ಹೇಳಿದರೂ ನಗಬೇಕೆಂದ ನಿಯಮ ಇದೆ. ಮನಸು ಹೇಗಾದರೂ ಇರಲಿ ಸದಾ ಮುಗುಳ್ನಗುವ ಸುಂದರಿಯರಿದ್ದಾರೆ. ಮುಗುಳ್ನಗು ಉಕ್ಕಲೆಂದೇ toothpaste ಗಳಿವೆ...... ಕೋಡಂಗಿಗೆ ಇನ್ನು ಕೆಲಸವಿಲ್ಲ." ಹಾಗೆ ಇನ್ನು ಸ್ವಲ್ಪ ದಿನಗಳಲ್ಲಿ celebrity ಗಳೇ show ನಡೆಸುತ್ತಾರೆ. ತಜ್ಞರು-ತಜ್ಞರು ಮಾತನಾಡುತ್ತಾರೆ. ಆಗ ನಿರೂಪಕರ ಅಗತ್ಯ ಇಲ್ಲ. ಅಥವಾ ನಿರೂಪಕ ನಿಜವಾಗಿಯೂ ಕೋಡಂಗಿ ಜಾಗವನ್ನು ಸರಿಯಾಗಿ ತುಂಬುತ್ತಾನೆ...

Friday, July 2, 2010

ಹೊಸ ರಾಗವಿದೂ ........

    ಪ್ರಸಾರ ಅಂದ ಕೂಡಲೇ ನಮ್ಮ ಕಿವಿಯಲ್ಲಿ ಒಂದು ಮಧುರ ನಾದ. ಕಣ್ಣ ಮುಂದೆ ಚಿತ್ರಗಳ ಸಾಲು.. ಮನದಲ್ಲಿ ಒಂದು ಚೆಂದದ ಅನುಭೂತಿ!.. ಪ್ರಸಾರಕ್ಕೆ ಬೇರೆ ಬೇರೆ ಅರ್ಥಗಳು ಇರಬಹುದು. ಆದರೆ ಅದು ಹೆಚ್ಚಾಗಿ ಹೊಂದಿಕೊಂಡು ನಡೆದು ಬಂದಿರುವುದು ರೇಡಿಯೋ, t v   ಜೊತೆ ಜೊತೆಗೆ ಎಂದರೆ ಸರಿ ಆದೀತು. 
  ಪ್ರಸಾರ ಸಾರವತ್ತಾಗಿರಬೇಕು, ಕೆಲವರ ಸವಲತ್ತಾಗಬಾರದು ಎಂಬುದು ನಂಬಿಕೆ, ಆದರ್ಶ.ಪ್ರಸಾರ ಶ್ರೋತ್ರು ಅಥವಾ ವೀಕ್ಷಕ ಇಷ್ಟಪಡುವ ಹಾಗೆ ಇರಬೇಕು ಅನ್ನೋದು ಮತ್ತೊಂದು ತತ್ವ.. ಪ್ರಸಾರ ಅಂದರೆ ಅದು ಮನರಂಜನೆ, ಜ್ಞಾನ, ಮಾಹಿತಿ ಇವುಗಳ ಮಿಶ್ರಣ ಅನ್ನೋದು ಓಬಿರಾಯನ ಕಾಲದಿಂದ ಎಲ್ಲ ಘೋಷಣೆ ಮಾಡ್ತಾ ಇರೋ ಸಾಲು.
 ಪ್ರಸಾರ ಅಂದರೆ ಅದು ಒಂದೇ , ಆಕಾಶವಾಣಿ ದೂರದರ್ಶನ ಅನ್ನೋ ಆ  ಕಾಲದಲ್ಲಿ ಅದು ಹದವಾಗಿತ್ತು, ಹಾಡಾಗಿತ್ತು, ಹೊನಲಾಗಿತ್ತು.. ..
  ಈಗ?
    ಪ್ರಸಾರ  ಮತ್ತು ಪ್ರಚಾರ  ಒಂದೇ ಅರ್ಥ ಪಡೆದುಕೊಳ್ತಾ ಇದೆ ಅಂದ್ರೆ ಅದು ತಪ್ಪಾಗಲಾರದು. ಮಾಧ್ಯಮಗಳ ನೀತಿ ಬದಲಾಗುತ್ತಿದೆ. ಜಾಗತಿಕ ರಂಗದಲ್ಲಿ ಸ್ಪರ್ಧೆಗೆ ಮೈ ಒಡ್ಡಿ ನಿಂತಿರುವ ಈ ಬದಲಾವಣೆಯ ಪರ್ವದಲ್ಲಿ ಪ್ರಸಾರದ ಕಲ್ಪನೆಗಳು ಹೊಸ ಆಯಾಮ ಪಡೆದು ಕೊಳ್ತಾ ಇವೆ. 
   ಆಕಾಶವಾಣಿ ಅಂಗಳದಲ್ಲಿ ಬೇಂದ್ರೆ ನಗ್ತಾ ನಿಲ್ತಿದ್ರು... ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ವಿಭಾಗದ ಉಸ್ತುವಾರಿ ಹೊತ್ತಿದ್ರು.. ಅಡಿಗರ ಭೂಮಿಗೀತ ಅಕಾಶವಾಣಿ ಗಾಗಿಯೇ ಮೊದಲು ಹುಟ್ಟಿತು.. ಹೀಗೆ  ಮಾತುಗಳನ್ನು ಕೇಳ್ತಾ ಇರ್ತೀವಿ.. ದೂರದರ್ಶನದ ಒಂದು ಕನ್ನಡ ಕಾರ್ಯಕ್ರಮಕ್ಕಾಗಿ ಹೇಗೆ ಜನ ಕಾಯ್ತಾ ಕೂತುಕೊಳ್ತಿದ್ರು.. ಅಂತ ನಮಗೆಲ್ಲ ಗೊತ್ತು... 
  ಅದು ಭಾವ ಸಂಗಮ!  ಪ್ರಸಾರ ತಾಣಗಳು ಚರ್ಚೆಯ ಆವರಣ! ರಾಗ ತಾಳಗಳ ಮಿಲನ!.... 
   ಅದಕ್ಕೆ ಅದು ಎದುರಿನ  ವ್ಯಕ್ತಿಯ ಸ್ಪಂದನವೂ ಆಗಿರ್ತಿತ್ತು!!
   ಒಂದು ಅರ್ಧ ಗಂಟೆ ನಾಟಕ, ಅಥವಾ ಕಾರ್ಯಕ್ರಮ ಪ್ರಸಾರ ಕಾಣಲು ಕನಿಷ್ಠ ೬-೭ ದಿನಗಳು ಬೇಕಾಗ್ತಾ ಇತ್ತು.. rehearsal ನಲ್ಲಿ ಪಾಲ್ಗೊಂಡು ಕಾಯಬೇಕಾಗುತ್ತಿತ್ತು. ಆಕಾಶವಾಣಿ, ದೂರದರ್ಶನದ ಪ್ರಸಾರ ನಿಜ ಅರ್ಥದಲ್ಲಿ ಮನಸು ಮನಸುಗಳ ನಡುವಿನ ಪ್ರಸಾರ ಆಗಿರ್ತಾ ಇತ್ತು ಅನ್ನಬಹುದು.. 
 ಪ್ರಸಾರ ಮತ್ತು ಪ್ರಚಾರ ಒಂದೇ ಆಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಚಿತ್ರಗೀತೆಗಳು ಬಕಾಸುರನಂತೆ ಎಲ್ಲ ಕಡೆ ಬಾಯಿ, ಹೊಟ್ಟೆ ಹರಡಿ ಕುಳಿತಿವೆ... ಚಿತ್ರಗೀತೆ ಬಿಟ್ಟರೆ ಪ್ರಸಾರಕ್ಕೆ ಬೇರೆ ಸಾಮಗ್ರಿ ಇದೆ ಅನ್ನೋದು ಯಾಕೋ ಹೆಚ್ಚಿನವರ  ಗಮನಕ್ಕೆ  ಬರುತ್ತಿಲ್ಲ .FM ಖಾಸಗಿ ವಾಹಿನಿಗಳು ಪ್ರಸಾರ ಅನ್ನೋ ಪದದ ಕಲ್ಪನೆಯನ್ನೇ ಬದಲಾಯಿಸಿವೆ.
   ಕಿರುತೆರೆ ಸ್ವಲ್ಪ ವಾಸಿ. ವಿವಿಧ ವಿಷಯಗಳಿಗೆ ವಿವಿಧ ಸಮಗ್ರ channel    ಗಳೇ ಇವೆ. ಆದರೆ ಬಾನುಲಿರಂಗದಲ್ಲಿ ಇಷ್ಟು ವಿಸ್ತಾರ ಕಾಣುತ್ತಿಲ್ಲ. ದೊಡ್ಡ ನಗರಗಳಲ್ಲಿ 8-10 ಚಾನೆಲ್ ಗಳು ಇದ್ದರೂ    ಎಲ್ಲವೂ ಪೂರ್ಣ ಹಿಂದಿ, ಹಾಗು ಸ್ಥಳೀಯ ಚಿತ್ರಗೀತೆಗಳಿಗೆ ಮೀಸಲಾಗಿವೆ.ಒಂದು  ಶೋ,ಒಬ್ಬ guest ,ಒಂದಷ್ಟು ಮಾತು, ಒಂದಷ್ಟು ಹರಟೆ, ಬಿಟ್ಟರೆ ಬೇರೆ ಬಗೆಯ ಧ್ವನಿಮುದ್ರಿತ ಆಯೋಜಿತ, ಕಾರ್ಯಕ್ರಮಗಳು ಕಣ್ಮರೆ ಕಿವಿಮರೆ ಆಗ್ತಾ ಇವೆ.
 ನೇರ ಪ್ರಸಾರಗಳ ಮಜಾ ಈಗ ಸಜಾ ಆಗುತ್ತಿದೆ.. ತಯಾರಿ ಇಲ್ಲದೆ ಟೈಮ್ ರೈಲು ಓಡಿಸುತ್ತಿದ್ದಾರೆ ಎಲ್ಲ ತಳ್ಳು ಮಾಡೆಲ್ ಗಾಡಿಗಳೇ!! 
  ಈಗ ಕಲಾವಿದರಿಗೆ ಬಿಡುವಿಲ್ಲ. ಪ್ರಚಾರ ಮುಖ್ಯ.  
   ನಗರದಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮಗಳ ಪ್ರಚಾರ, ಬಿಡುಗಡೆ ಆಗಲಿರುವ ಚಿತ್ರಗಳ ಪ್ರಚಾರ ಅಭಿವೃದ್ಧಿ ಆಗಿದೆ ಅಂತ prove A ಮಾಡಲು ಸರ್ಕಾರ ನಡೆಸೋ ಪ್ರಚಾರ , ಚಾನೆಲ್ ಪ್ರಚಾರಕ್ಕೆ ನಡೆಸೋ ವೈಯುಕ್ತಿಕ ಪ್ರಚಾರ ..... .. top1  ಅಂತ ಹೇಳಿಕೊಳ್ಳಲು ಪ್ರಚಾರ...   ಹೌದು. ಆಗಿನ ಪ್ರಸಾರದಲ್ಲಿ ' ಸಾರ' ಇತ್ತು.. ಈಗಿನ ಪ್ರಚಾರದಲ್ಲಿ 'ಚಾರ' ಅಂದರೆ ಲೆಕ್ಕಾಚಾರ ಇದೆ..
   channel  ಗೆ ಹಣ ನೀಡಿ, ಸಮಯ ಕೊಂಡುಕೊಳ್ಳಿ, ನಿಮಗೆ ಬೇಕಾದ ಆಚಾರ ಆರಿಸಿಕೊಳ್ಳಿ.
   ದೊಡ್ಡ ದೊಡ್ಡ ಹೆಸರಾಂತ ಕಲಾವಿದರೂ ಕೂಡ ಪ್ರಚಾರಕ್ಕೆ ಸಂದರ್ಶನ ಕೊಡ್ತಾರೆ ಹೊರತು ಸಾರ ಅಂದಾಗ.. ಸಾರೀ  ಅಂತಾ ಇದ್ದಾರೆ.
     ಪತ್ರಿಕಾ ಸಂಪಾದಕರು, ಪತ್ರಕರ್ತರು, ಹಾಡುಗಾರರು, electronic ಮಾಧ್ಯಮದ  ಪ್ರಸಾರದ ರೂಪುರೇಷೆಗಳ ಮೂಲ ಕಲ್ಪನೆಯೂ ಇಲ್ಲದವರು, ಇಂದು, ಪ್ರಚಾರದ ಸಾಮಗ್ರಿಗಳಾಗುತ್ತಿದ್ದಾರೆ. 
  ಪ್ರಚಾರ  ಯಾವುದು, ಪ್ರಸಾರ ಯಾವುದು ಅಂತ ನಿರ್ಧರಿಸೋ ಸಮಯ ವ್ಯವಧಾನ ಮಾಧ್ಯಮಗಳಿಗೆ ಇಲ್ಲ. ಅರಿವು ಹುಟ್ಟಬೇಕಾದ ಮುಖ್ಯ ಸ್ಥಳಗಳೆ ಮೌನ ತಾಳಿವೆ. ಅಂತರಗಂಗೆ ಬತ್ತುತ್ತಿದೆ.  
  ನಾವೆಲ್ಲಾ ಪ್ರಹಾರಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು ಇಂದಿನ ಅನಿವಾರ್ಯ.. 
  ಇದು ಬದಲಾವಣೆಯೇ? ಹೊಸ ಸವಾಲೇ?