Saturday, August 24, 2019

ನಿಮ್ಮೂರ ದಾರಿಯಲಿ..ನಮ್ಮನ್ನೇ ಹುಡುಕುತ್ತಾ.... 

ಊರು ಎನ್ನುವುದು ನಮಗೆ ಉಸಿರಿನಷ್ಟೇ ಮುಖ್ಯ. ಎಲ್ಲೇ ಇರಲಿ, ಹೇಗೆ ಇರಲಿ, ನಾವು ಆಡಿಬೆಳೆದ ನಮ್ಮೂರು ನಮಗೆ ಎಂದೂ ಚೆಂದ.

"ನಿಮ್ಮೂರು ಯಾವುದು" ಎಂದು ಶುರುವಾಗುವ ಸಂಭಾಷಣೆ,' ನಮ್ಮೂರೇ ಚಂದ 'ಎಂದು ವಾದಕ್ಕೆ ಇಳಿಯುವುದನ್ನು ಕಾಣುತ್ತೇವೆ.

ಕೇಳಿರುವ ,ಆದರೆ ನಾವು ಕಾಣದಿರುವ ಊರುಗಳ ಬಗ್ಗೆ, ಒಂದು ಅಚ್ಚರಿ, ಕುತೂಹಲ ನಮ್ಮೊಳಗೆ ಸದಾ ಜಾಗೃತ ವಾಗಿರುತ್ತದೆ.  ಊರು ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯ ಅಲ್ಲವೇ..

  ಪ್ರತಿಯೊಬ್ಬರೂ ತಮ್ಮ ಬಾಲ್ಯ ದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರು ಗಳಾಗಿ ಪೋಷಿಸಿ ನೀರೆರೆದಿರುತ್ತಾರೆ.  ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು , ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

 

"ನೀನೊಬ್ಬನೇ ಬಾರೋ ಕರೆ ತರಬೇಡ, ಕಹಿ ನೆನಪನ್ನು".. ಎಂದು ಹೆಚ್. ಎಸ್. ವೆಂಕಟೇಶ ಮೂರ್ತಿ ಅವರ ಕವನ .

ಜಾತಿ , ಕುಲ, ಊರು, ಕೇರಿ, ವಂಶಾವಳಿ ಬೇಡ .. ನೀನೊಬ್ಬ ಬೇಕು ಅಷ್ಟೇ .  

ಹೆಸರು, ಊರೂ ಕೂಡ ಬೇಡ..

ನಮ್ಮ ಬದುಕಿಗೆ ನಾವಿಕರು ನಾವೇ ಎಂಬ ಅರ್ಥದ್ದು.

ಊರು ಯಾವುದೇ ಇರಲಿ, ಅಲ್ಲಿ ಜನ , ಮನಸು , ಬಂಧನ, ಬಣ್ಣ, ಬೆವರು, ಇದೆ.

ಹಾಗಾಗಿಯೇ ನಮಗೆ ಒಂದೊಂದು ಊರು ಒಂದೊಂದು ರೀತಿ ಆಕರ್ಷಿಸುತ್ತ ದೆ.

 ಸಾಹಿತ್ಯ ದಲ್ಲಿ ಕಂಡು ಬರುವ ಊರು ಕೇರಿಗಳು,ಅವುಗಳ ಜೊತೆ ನಮ್ಮ ನಂಟು . ಇವು ಕೂಡ ಒಂದು ವಿಚಿತ್ರ ಬಂಧ.

ಕೆಲವು ಮತ್ತೆ ಮತ್ತೆ ಕಾಡುವ ಊರು ಗಳು.

ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ.

ರಾಮಾಚಾರಿ ಮತ್ತು ಚಿತ್ರದುರ್ಗ..ನೋಡಿ.

ಅವಿನಾಭಾವ ಸಂಬಂಧ.. ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ , ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ.

ರಾಮಾಚಾರಿ , ಮತ್ತು ಚಿತ್ರದುರ್ಗ ಬೇರ್ಪಡಿಸಲು ಸಾಧ್ಯವೇ.. 

ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ..

ಕೂಡಲೇ .. ನಾವು ಅರ್ಥ ಮಾಡಿಕೊಳ್ಳುತ್ತೇವೆ. . ಆಗ ಗುಣ ಗ್ರಾಹಿ ಆಗುತ್ತೇವೆ. ಚಿತ್ರದುರ್ಗ ನೋಡಿರುವವರು  ಗ್ರಹಿಸುವ ಶೈಲಿ ಬೇರೆ. ಬೆಂಗಳೂರು ಅಥವಾ ಧಾರವಾಡ ಮಂದಿ ಗ್ರಹಿಸುವ ಶೈಲಿ ಬೇರೆ.

ತ. ರಾ. ಸು. ರಾಮಾಚಾರಿ ಯನ್ನು ಬೇರೆ ಯಾವುದಾದರೂ ಜಾಗದಲ್ಲಿ ಸೃಷ್ಟಿ ಮಾಡಲು ಆಗುತ್ತಿತ್ತೆ?.

ಮಕ್ಕಳು Alice in Wonderland ಓದುವಾಗ.. ಎಚ್. ಎಸ್. ವೆಂಕಟೇಶಮೂರ್ತಿ ಕವನದ ಹಾಗೆ. ಶುಭ್ರಾತಿಶುಭ್ರ ಮನಸ್ಥಿತಿ ಯಲ್ಲಿ ಇರುತ್ತಾರೆ.

ಹ್ಯಾರಿ ಪಾಟರ್ ಓದುವಾಗ ಅನುಭವಿಸುವ ರೋಮಾಂಚನ! .. ಅದು ಯಾವ ಊರಾದರೇನು..

ಭಾಷೆ ಯಾವುದಾದರೇನು..ಹಾಗೇ..

ಮಾಲ್ಗುಡಿ ಊರನ್ನು ಯಾರೂ ನೋಡಿಲ್ಲ.

ಆದರೆ ಎಲ್ಲರೂ ನೋಡಿದ್ದಾರೆ. R K ನಾರಾಯಣ್ ತೋರಿಸಿದ ಊರು.

ಕಥೆಗೊಂದು ಊರೋ.. ಅಥವಾ. ಊರಿಗೊಂದು ಕಥೆಯೋ. .

ಊರುಭಂಗ ಮಾಡುವುದು ಕಷ್ಟ.

ಯು. ಆರ್. ಅನಂತಮೂರ್ತಿ ಅವರ ಒಂದು ಕಾದಂಬರಿ ಭಾರತೀಪುರ.

ಅವರು ಕಥೆ ಉದ್ದಕ್ಕೂ ಭಾರತೀಪುರ ಎಂದು ಹೇಳಿದರೂ .. ನಮಗೆ ಅದು ಕಲ್ಪಿತ ಊರು ಎನಿಸುವುದಿಲ್ಲ.

ಅದು ಇದೇ ಊರು ಎಂದು ಗುರುತಿಸುತ್ತೇವೆ.

ಎಷ್ಟು ವಿಚಿತ್ರ.. ಅಲ್ಲವೇ..

ಚಂದಮಾಮ ಕಥೆ ಗಳಲ್ಲಿ ಬರುವ ಮಗಧ, ಪಾಂಚಾಲ, ವಿದರ್ಭ, ಕಳಿಂಗ..

ಎಲ್ಲಾ ನಮ್ಮ ನಮ್ಮ ಊಹೆಯಂತೆ.

ಕಥೆಗಾರ ನಿಗೆ ಊರಿನ ಹಂಗು ಇದೆಯೇ..

ವಿಮರ್ಶಕ ಎಚ್. ಎಸ್. ರಾಘವೇಂದ್ರರಾವ್ ಹೇಳಿದರು..

"ಹಾಗೇನಿಲ್ಲ.. ಕಥೆಯನ್ನು ಎಲ್ಲಿ ಕುಳಿತರಲ್ಲಿ ಕಲ್ಪಿಸುವ ಹಾಗೇ ಇರಬೇಕು. ಊರು ಮತ್ತು ಪಾತ್ರ ಮಾನವೀಯ ಸಂಬಂಧ ಗಳ ನೆಲೆಗಟ್ಟಿನಲ್ಲಿ ಇದ್ದರೆ, ಸಂಬಂಧ ಸ್ರವಿಸುವ ರಸ ಮುಖ್ಯವೇ ಹೊರತು ಎಲ್ಲಿ ನಡೆಯಿತು ಎಂಬುದಲ್ಲ. ಆದರೆ ಇತಿಹಾಸ ಪ್ರಚೋದಿತ ಕೃತಿಗಳಿಗೆ ಊರು ಮುಖ್ಯ , ಎಂದರು. ನೇಮಿಚಂದ್ರ ಅವರ    

ಪೆರುವಿನ ಕಣಿವೆಯಲ್ಲಿ, ಮಾಸ್ತಿ ಅವರ ಚಿಕ್ಕ ವೀರ ರಾಜೇಂದ್ರ,  ಕೆ ವಿ. ಅಯ್ಯರ್ ಅವರ ಶಾಂತಲೆ, .. ಕಿತ್ತೂರು ರಾಣಿ ಚೆನ್ನಮ್ಮ..ಮುಂತಾದವು. ಊರೇ ಪ್ರಧಾನ ವಾದವು ಎಂಬಂತದ್ದು..

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾರಂತರ ಮೂಕಜ್ಜಿಯ ಕನಸು, ಅಥವಾ ಮರಳಿ ಮಣ್ಣಿಗೆ, ತೇಜಸ್ವಿ ಅವರ  ಕರ್ವಾಲೋ , ಇವುಗಳಲ್ಲಿ ನಾವು ಏನನ್ನು ಕಲ್ಪಿಸುತ್ತೇವೆ . ಯಾರನ್ನು ನೋಡುತ್ತೇವೆ.?

ಒಂದು ಕಥೆ ಗೆ ನಿರ್ದಿಷ್ಟ ಊರು ಗುರುತಿಸುವುದು ಲೇಖಕ.

ಓದುಗನಿಗೆ ಅದು ಎಷ್ಟು ಮುಖ್ಯ?

ನನ್ನ ಕಥೆ ಮೂಡಿಗೆರೆ ಯಲ್ಲಿ ಮಾತ್ರ ನಡೆಯುತ್ತದೆ ಎಂದು ತೇಜಸ್ವಿ ಹೇಳಿದರೆ  ಅದರ ಸಾರ್ವಭೂಮಿಕಾ ವಲಯ , ಮಿತಿಗೆ ಒಳಪಡುತ್ತದೆ. ಭೈರಪ್ಪ ಅವರ ಸಕಲೇಶಪುರ, ಸಮೀಪದ ಹೆಸರು ಹೊತ್ತ ಹಳ್ಳಿಗಳು ನಮ್ಮ ಮನದಲ್ಲಿ ಹೇಗೆ ಅರಳುತ್ತವೆ?

"ನನ್ನ ಕಾದಂಬರಿಯ ಭಾವ ಪ್ರಪಂಚಕ್ಕೆ ಸೇರಿದ ಹನೆಹಳ್ಳಿ, ದಾದರ್, ಮುಂಬೈ, ವ ಡಾಲ, ಗಿರ್ಗಂವ್, ಮೊದಲಾದ ದಿವ್ಯ ಹೆಸರು ಹೊತ್ತ ಭೂ ಪ್ರದೇಶ ಇಂದು ವಾಸ್ತವ ಜಗತ್ತಿನಲ್ಲಿ ನೋಡಲು ಸಿಗುವುದು ಒಂದು  ಅತ್ಯದ್ಭುತ ಆಕಸ್ಮಿಕ"  ಎನ್ನುತ್ತಾರೆ ಯಶವಂತ ಚಿತ್ತಾಲರು. . ಚಿಂತನೆ ವಿಸ್ತಾರ ಗೊಳ್ಳುತ್ತ ಸಾಗುತ್ತದೆ.

ಊರು ಮನುಷ್ಯ ನ ಹಾಗೇ. ಇತಿ ಮಿತಿ ಹೊತ್ತು ನಮ್ಮನ್ನು ನಡೆಸುತ್ತದೆ.

ಜಯಂತ ಕಾಯ್ಕಿಣಿ ಅವರ ಮುಂಬೈ ಕಥೆಗಳನ್ನು ಓದಿ ಆ ಪ್ರದೇಶ ನೋಡಲು 

ಹುಡುಕಿ ಹೋ ದವರು ಇದ್ದಾರೆ. ಒಮ್ಮೆ ಮುಂಬೈ ನೋಡಬೇಕು ಎಂದು ಕನವರಿಸುತ್ತಾ ಅದನ್ನು ಕಲ್ಪನೆಗೆ ಅಳವಡಿಸಿಕೊಂಡ ವರಿದ್ದಾರೆ.." ಇದೇ ಇದೇ ಅವರು ಹೇಳಿದ್ದು " ಎಂದು ಆನಂದಿಸಿದವರು ಇದ್ದಾರೆ.  ಮುಂಬೈ ಬಿಟ್ಟು ಈ ಕಥೆ ಊಹಿಸಲು ಸಾಧ್ಯವೇ..?

ಮುಲುಂಡಿಯ ಲಾಲ್ ಬಹಾದ್ದೂರ್ ರಸ್ತೆ,  ಬೆಂಗಳೂರಿನ ಗಾಯನ ಸಮಾಜ ರಸ್ತೆ ಆಗುತ್ತದೆಯೇ.? ಶಿವಾಜಿ ಪ್ರತಿಮೆ ಕೆಂಪೇಗೌಡನ ಪ್ರತಿಮೆ ಎಂದು ಊಹಿಸಲು ಆಗುತ್ತದೆಯೇ..

"ನಮಗೆ ಪಾತ್ರ ಮುಖ್ಯ, ಭಾವ ಮುಖ್ಯ" ಎಂದರು ಯುವ ಕವಯತ್ರಿ ನಾಗಶ್ರೀ.

"ಸಂವೇದನೆ ಮುಖ್ಯ ಆದಾಗ ಸ್ಥಳ ಬೇಕಾಗಿಲ್ಲ, ಅದು ಸೃಷ್ಟಿಕರ್ತನ ಕಥನ ..ಆತನ ಪ್ರಾದೇಶಿಕ ಅಗತ್ಯ "

ಎನ್ನುವುದು ಮತ್ತೋರ್ವ ಕತೆಗಾರ್ತಿ ಅನಿಸಿಕೆ. 

"ಊರೇ ಏಕೆ.. ಕಥೆಗಳಲ್ಲಿ ಬರುವ ಆಸ್ಪತ್ರೆ, ರಂಗಮಂದಿರ, theatre ಎಲ್ಲವನ್ನೂ ನಾವು ನೋಡಿರುವಂಥದ್ದಕ್ಕೆ ಕಲ್ಪಿಸು ತ್ತೇವೆ , ಬೆಟ್ಟ , ಗುಡ್ಡ, ನದಿ ಕೂಡ. ಸೌಂದರ್ಯ ಎಂದಾಗ ಅವರವರ ಕಣ್ಣಿಗೆ ಎನ್ನುತೇವಲ್ಲ, ಹಾಗೇ .. ಅಂದವರು  ಓದುಗ  ನಾಗರಾಜ್.

 ಕಥೆಯು ಊರಿನ ಒಳಗೋ.. ಊರು ಕಥೆಯ ಒಳಗೊ . ಊರು ಕಥೆ ಗಳೆರಡೂ

ನಮ್ಮೊಳಗೋ.

ನಾವು ಲೇಖಕನ ಒಳಗೋ , ಲೇಖಕ ನಮ್ಮೊಳಗೋ.. ಲೇಖಕ ನಾವು ಎರಡೂ ಊರೊಳಗೋ....ನಿಮ್ಮೂರೆ ನಮ್ಮೂರು, ನಿಮ್ಮೋರೆ ನಮ್ಮೋರು..ಎಂಬ ಆಪ್ತ ಮನಸು , ಚಿತ್ರ ಚೈತ್ರ ಮೂಡಿಸಲಿ. ವಿಶ್ವವೇ ನಮ್ಮೂರಾಗಲಿ.ನಮ್ಮೂರೇ ವಿಶ್ವ ವಾಗಲಿ.

ಇದು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ , ಪ್ರಕಟವಾದ ಬರಹ.





2 comments:

  1. ಅರ್ಥಪೂರ್ಣ ಬರಹ. ನಾವು ಎಲ್ಲೇ ಇದ್ದರೂ ನಮ್ಮದೆಂಬ ನೆಲೆಯನ್ನು ಕಲ್ಪಿಸದ ನಮ್ಮ ಅಸ್ಮಿತೆ ಇರುತ್ತದೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ. ನಾನು ಕನಸು ಕಾಣುವಾಗ ಸಹಾ ನನ್ನದು ಎಂಬ ಒಂದೇ ನೆಲೆ ನಿರಂತರವಾಗಿರುವುದು ನನ್ನ ಜೊತೆ ಇರುತ್ತೆ ಎಂಬ ನಂಬಿಕೆ ನನ್ನದು. ಅದೊಂದು ರೀತಿ ಒಂದೇ ರಂಗದ ಮೇಲೆ ವಿಧ ವಿಧ ಪರದೆಗಳು ಸರಿದುಹೋಗುವ ಹಾಗೆ.

    ನಾನು 1983ರ ಸಮಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಸಂಚರಿಸಿದಾಗ ಈ ಜಾಗಗಳನ್ನೆಲ್ಲ ಬೆಟ್ಟಗುಡ್ಡಗಳನ್ನೆಲ್ಲ ಎಲ್ಲೋ ನೋಡಿದ್ದೇನೆ ಅನಿಸುತ್ತಿತ್ತು. ನಿಜವೇನೆಂದರೆ ನಾನು ಅಲ್ಲಿಯವರೆಗೆ ಪ್ರಯಾಣವೇ ಹೋಗಿರಲಿಲ್ಲ. ಆಗ ನನಗೆ ಅರಿವಿಗೆ ಬಂದಿದ್ದು, ಓಹ್ ಇದೆಲ್ಲ, ನಾನು ನೊಡುತ್ತಿರುವುದೆಲ್ಲ ಕಾರಂತರ ಕಾದಂಬರಿಗಳನ್ನು ಓದಿದಾಗ ನನ್ನ ಸ್ಮೃತಿಯಲ್ಲಿ ದಾಖಲಾಗಿರುವ ಚಿತ್ರಗಳೊಂದಿಗಿನ ತುಲನೆ ಎಂದು.

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete